ಯಾದಗಿರಿ: ನಗರದ ಹಳೆಯ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಶನಿವಾರ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಹಿರಿಯ ಸಾಹಿತಿ ಸಿದ್ದರಾಮ ಹೊನ್ಕಲ್ ಮಾತನಾಡಿ, ರವಿ ಬೆಳಗೆರೆ ನಮ್ಮ ಒಡನಾಟ ಕಳೆದ 30 ವರ್ಷಗಳಿಂದ ಇದೆ. ಪತ್ರಿಕೋದ್ಯಮದಲ್ಲಿ ಹೇಗೆ ಬರೆಯಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ. ಹಾಯ್ ಬೆಂಗಳೂರ್ ಮೂಲಕ ರಾಜ್ಯದ್ಯಾಂತ ಹೆಸರುವಾಸಿಯಾಗಿದ್ದ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ನಿಧನ ಸುದ್ದಿ ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ ಆಗಿದೆ ಎಂದು ಹೇಳಿದರು.
ವಾರ ಪತ್ರಿಕೆ ಮೂಲಕ ನಾಡಿನ ಓದುಗರ ಮನೆ ಮಾತಾಗಿದ್ದರು. ಸುಮಾರು 82 ಪುಸ್ತಕಗಳನ್ನು ಬರೆದಿದ್ದಾರೆ. ರವಿ ಬೆಳಗೆರೆ ಅವರು ನೇರ, ದಿಟ್ಟ, ನಿಷ್ಠುರತೆಗೆ ಹೆಸರಾಗಿದ್ದರು. ಯುವ ಪತ್ರಕರ್ತರು ಅವರ ಸಿದ್ದಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಖ್ಯಾತ ಹಾಸ್ಯ ಕಲಾವಿದ ಬಸವರಾಜ್ ಮಾಮನಿ ಮಾತನಾಡಿ, ಮಾಧ್ಯಮ ಲೋಕದ ಕೊಂಡಿ ಕಳಚಿದೆ. ರವಿ ಬೆಳಗೆರೆ ಅವರು ಬರವಣಿಗೆ ಶೈಲಿ, ಮಾತಿನ ಶೈಲಿ ಎರಡೂ ಮೈಗೂಡಿಸಿಕೊಂಡಿದ್ದರು ಎಂದು ರವಿ ಬೆಳಗೆರೆ ಬಗ್ಗೆ ಮಾತನಾಡಿದರು.
ಜಿಲ್ಲಾ ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಪಿ.ನಾಡೇಕಾರ್, ಪತ್ರಕರ್ತರಾದ ಲಕ್ಷ್ಮಿಕಾಂತ ಕುಲಕರ್ಣಿ, ಬಿ.ಜಿ.ಪ್ರವೀಣಕುಮಾರ, ವೈಜನಾಥ ಹಿರೇಮಠ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಇಂದೂಧರ ಸಿನ್ನೂರ ಮಾತನಾಡಿದರು.
ಇದಕ್ಕೂ ಮೊದಲು ರವಿ ಬೆಳಗೆರೆ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಒಂದು ನಿಮಿಷ ಮೌನಚಾರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಿ, ಭಾರ್ವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪತ್ರಕರ್ತರಾದ ಎಸ್.ಎಸ್. ಮಠ, ಆನಂದ ಎಂ ಸೌದಿ, ರವಿ ನರಬೋಳಿ, ನಾಗಪ್ಪ ಮಾಲಿಪಾಟೀಲ, ಗಿರೀಶ ಕಮ್ಮಾರ, ಈರಯ್ಯಸ್ವಾಮಿ ಹಿರೇಮಠ, ರಾಜಕುಮಾರ ನಳ್ಳಿಕರ, ರಾಜೇಶಪಾಟೀಲ, ಅನಿಲ ಬಸೂದೆ, ಮಲ್ಲು ಕಾಮರೆಡ್ಡಿ, ಸಾಗರ ದೇಸಾಯಿ, ಸಿದ್ದು ಲಿಂಗೇರಿ, ನಾಗಪ್ಪ ಕುಂಬಾರ, ಮಲ್ಲು ಲಿಂಗೇರಿ, ಮಲ್ಲಿಕಾರ್ಜುನರೆಡ್ಡಿ ಹತ್ತಿಕುಣಿ, ನಾಗರಾಜ ಕೋಟೆ, ನಿವೃತ್ತ ಎಎಸ್ಐ ಬಸವರಾಜ್ ರಾಜಾಪುರ, ಅಶೋಕ ಮುದ್ನಾಳ, ದೀಪಕ್ ಪೋದ್ದಾರ್ ಇದ್ದರು. ಪತ್ರಕರ್ತ ವಿರುಪಾಕ್ಷಯ್ಯಸ್ವಾಮಿ ಹೆಡಗಿಮದ್ರಾ ಸ್ವಾಗತಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.