ADVERTISEMENT

ಶಹಾಪುರ | ₹ 4.76 ಲಕ್ಷ ಮೌಲ್ಯದ ಪಡಿತರ ಅಕ್ಕಿ ಜಪ್ತಿ

ಜೇವರ್ಗಿಯಿಂದ ಲಾರಿಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಣೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 15:38 IST
Last Updated 12 ಆಗಸ್ಟ್ 2024, 15:38 IST
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಬಳಿ ಸೋಮವಾರ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದರು
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಬಳಿ ಸೋಮವಾರ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದರು   

ಶಹಾಪುರ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ಭೀಮರಾಯನಗುಡಿಯ ಕಾಲುವೆಯ ಹತ್ತಿರ 142 ಕ್ವಿಂಟಲ್ (284 ಚೀಲ) ₹ 4.76 ಲಕ್ಷ ಮೌಲ್ಯದ ಅಕ್ಕಿಯನ್ನು ಸೋಮವಾರ ಆಹಾರ ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.

ನ್ಯಾಯ ಬೆಲೆ ಅಂಗಡಿಯ ಮೂಲಕ ಪಡಿತರ ಅಕ್ಕಿಯನ್ನು ಪಡೆದುಕೊಂಡು ಚೀಲದಲ್ಲಿ ಸಂಗ್ರಹಿಸಿಕೊಂಡು ಅಕ್ರಮವಾಗಿ ಲಾರಿಯಲ್ಲಿ ಹಾಕಿಕೊಂಡು ಜೇವರ್ಗಿಯಿಂದ ಶಹಾಪುರ ಮಾರ್ಗವಾಗಿ ಹೈದರಾಬಾದ್‌ ಕಡೆಗೆ ಲಾರಿಯಲ್ಲಿ ಸಾಗಿಸಲಾಗುತ್ತಿತ್ತು ಎಂದು ಆಹಾರ ಇಲಾಖೆಯ ಮೂಲಗಳು ತಿಳಿಸಿವೆ.

ರಾಜು ಎನ್ನುವರು ಲಾರಿಯ ಚಾಲಕ ಮತ್ತು ಮಾಲೀಕರಾಗಿದ್ದು, ಪಡಿತರ ಅಕ್ಕಿಯನ್ನು ಜೇವರ್ಗಿ ಮೂಲಕ ಚಂದ್ರ ಎಂಬುವವರು ಕರೆ ಮಾಡಿ ಅಕ್ಕಿಯನ್ನು ತುಂಬಿಕೊಂಡು ತೆರಳಲು ಸೂಚಿಸಿದ್ದರು. ಅದರಂತೆ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಲಾರಿ ಚಾಲಕ ರಾಜು ಎನ್ನುವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಭೀಮರಾಯನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಲಾರಿಯಲ್ಲಿ ಅಕ್ರಮವಾಗಿ ಜೇವರ್ಗಿಯಿಂದ ₹4.76 ಲಕ್ಷ ಮೌಲ್ಯದ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದಾಗ ಪೊಲೀಸರು ಜಪ್ತಿ ಮಾಡಿಕೊಂಡು ಲಾರಿ ಚಾಲಕನನ್ನು ಬಂಧಿಸಲಾಗಿದೆ.
ಉಮಾಕಾಂತ ಹಳ್ಳೆ, ತಹಶೀಲ್ದಾರ್‌

ಮತ್ತೆ ಸದ್ದು: ಇಲ್ಲಿನ ಟಿಎಪಿಸಿಎಂಎಸ್‌ನಲ್ಲಿ ₹2.6 ಕೋಟಿ ಮೌಲ್ಯದ ಪಡಿತರ ಅಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳಕ್ಕೂ ಹೆಚ್ಚು ಜನರನ್ನು ಎಂಟು ತಿಂಗಳ ಹಿಂದೆ ಶಹಾಪುರ ಠಾಣೆಯ ಪೊಲೀಸರು ಬಂಧಿಸಿದ್ದರು. ಅಲ್ಲದೆ ಚಿತ್ತಾಪುರ ತಾಲ್ಲೂಕಿನ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರು ಅಕ್ಕಿ ಸಾಗಣೆಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ತಿಂಗಳ ಹಿಂದೆ ಪೊಲೀಸರು ಬಂಧಿಸಿದ್ದು ರಾಜ್ಯದ ಗಮನ ಸೆಳೆದಿತ್ತು.

ಮತ್ತೆ ಈಗ ಪಡಿತರ ಅಕ್ಕಿ ಸಾಗಣೆ ಅಕ್ರಮ ಮರು ಜೀವ ಪಡೆದುಕೊಂಡಿದೆ. ಅಕ್ರಮ ಅಕ್ಕಿಯ ಹಿಂದಿರುವ ಜಾಲವನ್ನು ಭೇದಿಸುವಲ್ಲಿ ಪೊಲೀಸರು ಜಾಣ ಮೌನವಹಿಸಿದ್ದಾರೆ ಎಂಬ ಆರೋಪ ಜನತೆಯಿಂದ ಕೇಳಿ ಬರುತ್ತಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.