ಕಕ್ಕೇರಾ: ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟ್ಟಪ್ಪ ನಾಯಕ ತಿಳಿಸಿದರು.
ಪಟ್ಟಣದಲ್ಲಿ ಜರುಗಿದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಒಡಕು ಮೂಡಿಸುವ ವ್ಯಕ್ತಿಗಳಿಂದ ದೂರವಿರಬೇಕು. ಅಪಪ್ರಚಾರಗಳಿಗೆ ಕಿವಿಗೊಡದೆ ಪಕ್ಷದ ಆಶಯಗಳನ್ನು ಜನರಿಗೆ ತಲುಪಿಸಬೇಕು ಎಂದರು.
ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ರಾಮ ಪಂಚಾಯಿತಿ ಆಗಿದ್ದ ಕಕ್ಕೇರಾ ಪಟ್ಟಣ ಪುರಸಭೆ ಮಾಡುವ ಮೂಲಕ ಮೇಲ್ದರ್ಜೆಗೆ ಏರಿಸಿತು. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಎಲ್ಲಾ ವಾರ್ಡ್ಗಳಲ್ಲಿ ಮೂಲಸೌಕರ್ಯ ಒದಗಿಸಲು ಶ್ರಮಿಸಿದ್ದೇನೆ ಎಂದರು.
ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯದಿಂದ ಕೋವಿಡ್ ಬಿಕ್ಕಟ್ಟು, ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿವೆ. ಇದರಿಂದಾಗಿ ಯುವಕರು ಕಾಂಗ್ರೆಸ್ ಸೇರುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಹೋರಾಟ ಸಂಘಟಿಸಲಾಗುವುದು ಎಂದು ತಿಳಿಸಿದರು.
ಪಟ್ಟಣದ 23 ವಾರ್ಡ್ಗಳಿಗೆ ನೂರಾರು ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ವಾರ್ಡ್ ಮತದಾರರು ಹಾಗೂ ಪಕ್ಷದ ಮುಖಂಡ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಮುಖಂಡರಾದ ರಾಜಾ ವಿಜಯಕುಮಾರ ನಾಯಕ, ಮಲ್ಲಣ್ಣ ಸಾಹುಕಾರ, ಪರಮಣ್ಣ ಗುತ್ತೇದಾರ, ಗುಂಡಪ್ಪ ಸೊಲಾಪುರ, ನಿಂಗಯ್ಯ ಬೂದಗುಂಪಿ, ಸಿದ್ದಣ್ಣನಾಯಕ ದೇಸಾಯಿ, ಬದ್ದೆನಾಯ್ಕ್, ನಿಂಗಪ್ಪನಾಯ್ಕ, ಶರಣು ಸೊಲಾಪುರ, ವೆಂಕೋಬ ಸಾಹುಕಾರ, ಪರಮಣ್ಣ ಕುಂಬಾರ, ಅಬ್ದುಲ್ ಗಫೂರ್ ನಗನೂರಿ, ನಿಂಗರಾಜ ಬಾಚಿಮಟ್ಟಿ, ರವಿಚಂದ್ರ ಸಾಹು ಆಲ್ದಾಳ್, ಬಸಯ್ಯಸ್ವಾಮಿ, ಆದಯ್ಯ ಗುರಿಕಾರ, ಡಾ.ಗುಡ್ನಾಳ್, ಉತ್ತಪ್ಪ ಗೋಡಿಹಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.