ಯಾದಗಿರಿ: ಕ್ಷೌರಿಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ ₹5,000 ಪರಿಹಾರ ಧನಕ್ಕೆ ಬಿಪಿಎಲ್ ಕಾರ್ಡ್ ಅನ್ನು ಮಾನದಂಡ ಮಾಡಿರುವುದನ್ನು ಕೈಬಿಡಬೇಕೆಂದು ಸವಿತಾ ಸಮಾಜದ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಲಾಯಿತು.
ಈ ಕುರಿತುಮುಖ್ಯಮಂತ್ರಿಗೆ ಬರೆದ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದ ಸವಿತಾ ಸಮಾಜದ ಮುಖಂಡರು, ಕೊರೊನಾ ಲಾಕ್ಡೌನ್ನಿಂದಾಗಿ ಕ್ಷೌರಿಕರು ಆದಾಯ ಕಳೆದುಕೊಂಡಿದ್ದನ್ನು ಮನಗಂಡ ಮುಖ್ಯಮಂತ್ರಿ ರಾಜ್ಯದ 2.30 ಲಕ್ಷ ಕ್ಷೌರಿಕರಿಗೆ ₹5000 ಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಕಾರ್ಮಿಕ ಇಲಾಖೆ ಮಾನದಂಡ ಬಳಸುವ ಬದಲು ಬಿಪಿಎಲ್ ಕಾರ್ಡ್ ಮಾನದಂಡ ಬಳಸಲು ಮುಂದಾಗಿರುವುದು ಮುಖ್ಯಮಂತ್ರಿಗಳ ಆದೇಶಕ್ಕೆ ವಿರುದ್ಧವಾಗಿದೆ ಎಂದು
ತಿಳಿಸಿದರು.
ಬಿಪಿಎಲ್ ಕಾರ್ಡ್ ಕಡ್ಡಾಯವಾಗಿಸಿದರೆ ಬಹುತೇಕ ಬಡ ಕುಟುಂಬಗಳು ಸೌಲಭ್ಯದಿಂದ ವಂಚಿತರಾಗುತ್ತಾರೆ. ಆದ್ದರಿಂದ ಗುರುತಿನ ಚೀಟಿ, ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್ಗಳು ಆಧರಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅರ್ಜಿ ಸಲ್ಲಿಸುವ ದಿನಾಂಕವನ್ನು ಜುಲೈ 25 ರವರೆಗೆ ವಿಸ್ತರಿಸಬೇಕೆಂದು ಆಗ್ರಹಿಸಿದರು.
ಸವಿತಾ ಸಮಾಜ ಜಿಲ್ಲಾ ಘಟಕ ಅಧ್ಯಕ್ಷ ಅಪ್ಪಣ್ಣ ಚಿನ್ನಾಕಾರ್, ಮಲ್ಲಣ್ಣ ವಡಗೇರಿ, ಪ್ರಧಾನ ಕಾರ್ಯದರ್ಶಿ ನಾಗಪ್ಪ ಹತ್ತಿಕುಣಿ, ವಿಶ್ವನಾಥ ಬಸವನಗುಡಿ, ಗೋಪಾಲ ಕಿಲ್ಲೇದ, ಬಸವರಾಜ ಹೊಸಮನಿ, ರಮೇಶ ಹಕೀಂ, ಅಶೋಕ ಗೌನಳ್ಳಿ, ಅಂಬಣ್ಣ ಹೋರುಂಚಾ, ಮಂಜುನಾಥ ಕಿಲ್ಲೇದ, ಮಲ್ಲು ಮಲ್ಹಾರ, ನಾಗರಾಜ ಹೊಸಮನಿ, ರಾಘು ಹೊಸಮನಿ, ಶ್ರೀನಿವಾಸ ಕಲ್ಮನಿ, ರಾಘವೇಂದ್ರ ದಾಂಡೇಲಿ, ವೀರೇಶ ರಾಯಚೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.