ಸೈದಾಪುರ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಹಾ ಮಳೆಯು ಬೆಳೆಗಳನ್ನು ಹಾನಿಗೀಡು ಮಾಡುವ ಮೂಲಕ ರೈತರ ಬದುಕನ್ನು ಸಂಪೂರ್ಣವಾಗಿ ಆಹುತಿ ಪಡೆದುಕೊಂಡಿದೆ.
ಒಂದು ಕಡೆ ಕೊರೊನಾ ಭೀತಿಯ ಕಾಟ, ಮತ್ತೊಂದೆಡೆ ಭಾರಿ ಮಳೆಯಿಂದ ಭೀಮಾ ನದಿ ತೀರದಲ್ಲಿ ಉಂಟಾದ ಪ್ರವಾಹ ರೈತರನ್ನು ಹೈರಾಣಾಗಿಸಿದೆ. ಇದರಿಂದ ಚೇತರಿಸಿಕೊಳ್ಳುವ ಮುನ್ನವೇ ಹವಾಮಾನ ವೈಪರೀತ್ಯದಿಂದಾಗಿ ಬಿರುಗಾಳಿ-ಮಳೆಗೆ ಹೊಲಗದ್ದೆಗಳಲ್ಲಿನ ಬೆಳೆಗಳು ಸಂಪೂರ್ಣವಾಗಿ ನೆಲ ಕಚ್ಚಿವೆ. ಭತ್ತ ಹಾಗೂ ಹತ್ತಿ ಗಿಡದಲ್ಲೇ
ಮೊಳೆಕೆ ಒಡೆಯುತ್ತಿರುವುದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸೈದಾಪುರ ಸುತ್ತಮುತ್ತಲಿನ ಗ್ರಾಮಗಳಾದ ಕಣೇಕಲ್, ಆನೂರು(ಬಿ), ಆನೂರು (ಕೆ), ಗೂಡೂರು, ಭೀಮನಳ್ಳಿ, ಗೊಂದಡಗಿ, ಬೆಳಗುಂದಿ, ಕಡೇಚೂರು, ಶೆಟ್ಟಿಹಳ್ಳಿ, ಬಾಡಿಯಾಲ, ಬಳಿಚಕ್ರ, ಕಿಲ್ಲನಕೇರಾ, ರಾಂಪುರ, ಬಾಲಚೇಡ ಗ್ರಾಮಗಳು ಸೇರಿದಂತೆ ಅನೇಕ ಕಡೆ ಮಂಗಳವಾರ ಮತ್ತು ಬುಧವಾರ ಮಧ್ಯಾಹ್ನ ಗುಡುಗು ಸಹಿತ ಜೋರಾದ ಗಾಳಿ, ಮಳೆಯು ಒಟ್ಟಿಗೆ ಬಂದಿದ್ದರಿಂದ ಕಾಳು ಕಟ್ಟುವ ಹಂತದಲ್ಲಿದ್ದ ಭತ್ತ ನೆಲಕ್ಕೆ ಒರಗಿದೆ.
ಅರಳಿ ನಿಂತ ಹತ್ತಿಯು ಗಿಡದಲ್ಲಿಯೇ ಕಪ್ಪಾಗಿ ಮಾರುಕಟ್ಟೆಯಲ್ಲಿ ಫಸಲಿಗೆ ತಕ್ಕ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಲಕ್ಷ ಲಕ್ಷ ಸಾಲ ಮಾಡಿಕೊಂಡು ಬಿತ್ತನೆಗೆ ತಂದ ಬೀಜ, ರಸಗೊಬ್ಬರ, ಕ್ರಿಮಿನಾಶಕ್ಕಾಗಿ ಖರ್ಚು ಮಾಡಿದ ಹಣವನ್ನು ತೀರಿಸಲು ಸಾಧ್ಯವಾಗದಂತಹ ಶೋಚನಿಯ ಸ್ಥಿತಿ ನಿರ್ಮಾಣವಾಗಿದೆ.
ಮಳೆಯಿಂದಾಗಿ ಸಾವಿರಾರು ಎಕರೆ ಭತ್ತ ಮತ್ತು ಹತ್ತಿ ಬೆಳೆ ಹಾನಿಯಾಗಿದೆ. ಕೂಡಲೇ ಸರ್ಕಾರ ರೈತರ ನೆರವಿಗೆ ಬರಬೇಕು. ಸೂಕ್ತ ಪರಿಹಾರವನ್ನು ನೀಡಬೇಕು ಎನ್ನುತ್ತಾರೆ ಕಣೇಕಲ್ ರೈತ ನಾಗರೆಡ್ಡಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.