ಯಾದಗಿರಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸದೆ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಳಂಬ ಧೋರಣೆಯನ್ನು ಖಂಡಿಸಿ ನಗರದ ಶುಭಾಷ ವೃತ್ತದಲ್ಲಿ ಶನಿವಾರ ಮಾದಿಗ ದಂಡೋರ ಸಮಿತಿಯಿಂದ ಪ್ರತಿಭಟನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಮಾಜದ ಮುಖಂಡ ಮಲ್ಲಣ್ಣ ದಾಸನಕೇರಿ, ಒಳ ಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯ ಕಳೆದ 25 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವ ಪ್ರತಿಫಲವಾಗಿ ನ್ಯಾ.ಎ.ಜೆ. ಸದಾಶಿವ ಅವರನ್ನು ನೇಮಕ ಮಾಡಿದ್ದು, ನ್ಯಾಯಮೂರ್ತಿಗಳು ಸುದೀರ್ಘ ಆರು ವರ್ಷ ಎಂಟು ತಿಂಗಳ ಕಾಲ ಸಮಿಕ್ಷೆ ಮಾಡಿ 2012ರಲ್ಲಿ ಅಂದಿನ ಬಿಜೆಪಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆಡಳಿತ ನಡೆಸಿದ ಯಾವುದೇ ಪಕ್ಷವೂ ವರದಿ ಜಾರಿ ಮಾಡುವಲ್ಲಿ ವಿಳಂಬ ಧೊರಣೆ ಅನುಸರಿಸಿದವು ಎಂದು ಖಂಡಿಸಿದರು.
ಮುಖಂಡ ಹಣಮಂತ ಲಿಂಗೇರಿ, ಮಾತನಾಡಿ ನ್ಯಾ.ಸದಾಶಿವರವರು 2012ರಲ್ಲೇ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರಕ್ಕೆ ವರದಿ ಸಲ್ಲಿಸಿ 10 ವರ್ಷ ಕಳೆದರೂ ಆಳುವ ಸರ್ಕಾರವು ನಮ್ಮ ಸಮುದಾಯದ ಬಗ್ಗೆ ಕಿಂಚಿತ್ ಕಾಳಜಿ ತೋರದೇ ವರದಿಯನ್ನು ಪರಿಶೀಲನೆ ಮಾಡದೇ ಕೇಂದ್ರಕ್ಕೆ ಶಿಫಾರಸು ಮಾಡುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿವೆ ಎಂದು ದೂರಿದರು.
ಕೇಂದ್ರಕ್ಕೆ ಶಿಫಾರಸು ಮಾಡದಿರುವುದನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ನಂತರ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು. ಪ್ರತಿಭಟನೆ ವೇಳೆ ಮಾನವ ಸರಪಳಿ ರಚಿಸಿದ್ದರಿಂದ ಕೆಲ ಕಾಲ ವಾಹನಗಳು ಸಾಲಗಿ ನಿಂತುಕೊಂಡಿದ್ದವು.
ಈ ವೇಳೆ ಮಾದಿಗ ದಂಡೋರ ಜಿಲ್ಲಾ ಘಟಕದ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ, ಮರಿಸ್ವಾಮಿ ಗೋನಾಲ್, ದುರ್ಗಪ್ಪಸ್ವಾಮಿ ಗೊಂದೆನೂರ, ಗೋಪಾಲ ದಾಸನಕೇರಿ, ನಗರಸಭೆ ಸದಸ್ಯರಾದ ಗಣೇಶ ದುಪ್ಪಲ್ಲಿ, ಹಣಮಂತ ನಾಯಕ, ಸಾಮುವೇಲ್ ಕಣೆಕಲ್, ಮಲ್ಲಿಕಾರ್ಜುನ ಜಲ್ಲಪ್ಪನೋರ, ಚಂದ್ರಶೇಖರ ದಾಸನಕೇರಿ, ಸಂಜಯಕುಮಾರ ಕಾವಲಿ, ಸಾಬರೆಡ್ಡಿ ಕಲಬುರಗಿ, ಶರಣಪ್ಪ ವಡಿಗೇರಾ, ಮರೆಪ್ಪ ವಡಿಗೇರಾ, ಶಾಂತಪ್ಪ ಬೆಳಗುಂದಿ, ಲಕ್ಷ್ಮಣ ಚಿಗಾನೂರ, ನಾಗಪ್ಪ ಕಣೆಕಲ್, ಮಲ್ಲು ಹಲಗಿ ಕುರಕುಂದಾ, ನಾಗೇಂದ್ರ ರಾಯಚೂರಕರ್, ರಾಜು ಹೊಸಳ್ಳಿಕರ್, ರಾಜು ಕಡೇಚೂರ, ಅರ್ಜುನ ಚಿಗಾನೂರಸೇರಿದಂತೆ ಸಂಘಟನೆಯ ಮುಖಂಡರು, ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.