ಶಹಾಪುರ: ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪ್ರಕ್ರಿಯೆ ನಿರಂತರವಾಗಿದೆ. ಕ್ಷೇತ್ರಕ್ಕೆ ಭೇಟಿ ನೀಡಿ, ಅಭಿವೃದ್ಧಿ ಕೆಲಸಗಳ ಕುರಿತು ತಿಳಿದುಕೊಂಡು ಮಾತನಾಡಬೇಕು ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸವಾಲು ಹಾಕಿದರು.
ತಾಲ್ಲೂಕಿನ ರಬ್ಬನಹಳ್ಳಿ, ಕರ್ಕಳ್ಳಿ, ರಾಜಾಪುರ, ಕಕ್ಕಸಗೇರಾ, ಬೂದನೂರ ಗ್ರಾಮಗಳಿಗೆ ಶನಿವಾರ ಖುದ್ದಾಗಿ ಭೇಟಿ ನೀಡಿ ಆಯಾ ಗ್ರಾಮದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸ ಪರಿಶೀಲಿಸಿ ನಂತರ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.
‘ಈಗಾಗಲೇ ತಾಲ್ಲೂಕಿನ ರಾಜಾಪುರ ಹಾಗೂ ಕರ್ಕಳ್ಳಿ ಗ್ರಾಮದಲ್ಲಿ ತಲಾ ₹ 50 ವೆಚ್ಚದಲ್ಲಿ ಚರಂಡಿ ಹಾಗೂ ರಸ್ತೆ ನಿರ್ಮಾಣ ಕೆಲಸ ನಡೆದಿದೆ. ಗೋಗಿ-ಕರ್ಕಳ್ಳಿ ತಾಂಡಾ ರಸ್ತೆ ನಿರ್ಮಾಣಕ್ಕೆ ₹ 2 ಕೋಟಿ ವೆಚ್ಚದ ಕೆಲಸ ಸಾಗಿದೆ. ಅದರಂತೆ ಇನ್ನುಳಿದ ಗ್ರಾಮೀಣ ಪ್ರದೇಶ ರಸ್ತೆ ಹಾಗೂ ಚರಂಡಿ ಕಾಮಗಾರಿ ಮುಕ್ತಾಯಕ್ಕೆ ಬಂದಿವೆ’ ಎಂದು ಹೇಳಿದರು.
‘ಕ್ಷೇತ್ರದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಕುಂದುಕೊರತೆ ಆಲಿಸಲು ಸದಾ ನಿಮ್ಮೊಂದಿಗೆ ಇರುವೆ. ಗ್ರಾಮದ ಸಾರ್ವಜನಿಕರ ಸಮಸ್ಯೆಯನ್ನು ಮುಚ್ಚು ಮರೆ ಇಲ್ಲದೆ ತಿಳಿಸಬೇಕು. ಮೊದಲು ಅಭಿವೃದ್ಧಿ ಕೆಲಸವಾಗಲಿ. ರಾಜಕೀಯ ಬದಿಗೊತ್ತಿ ನನ್ನ ಬಳಿ ಬನ್ನಿ, ಸಾರ್ವಜನಿಕ ಕೆಲಸಗಳಿಗೆ ಸದಾ ನಿಮ್ಮೊಂದಿಗೆ ಇದ್ದು, ಕಾರ್ಯನಿರ್ವಹಿಸುವೆ’ ಎಂದರು.
‘ತಾಲ್ಲೂಕಿನ ಬುದನೂರ ಗ್ರಾಮದ ಕರೆಮ್ಮದೇವಿ ದೇಗುಲ ನಿರ್ಮಾಣಕ್ಕೆ ₹ 25 ಲಕ್ಷ ಅನುದಾನ ಒದಗಿಸಲಾಗಿತ್ತು. ಈಗ ಕಟ್ಟಡ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದೆ’ ಎಂದರು.
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಚಂದಾಪುರ, ಗ್ಯಾರಂಟಿ ಯೋಜನೆ ಅನುಷ್ಠಾನದ ತಾಲ್ಲೂಕು ಅಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ಭೀಮಣ್ಣ ಮಾಸ್ತರ ಬುದನೂರ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಗ್ರಾಮೀಣ ಪ್ರದೇಶದ ರಸ್ತೆ ಹಾಗೂ ಒಳಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ ಬಿಡುಗಡೆಯಾದ ₹ 3 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿವೆ. ಗುಣಮಟ್ಟದ ಕೆಲಸ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕುಶಣಬಸಪ್ಪ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.