ADVERTISEMENT

ಧರ್ಮಸಿಂಗ್ ಕೊಡುಗೆ ಅಪಾರ: ಶಾಸಕ ಅಲ್ಲಮಪ್ರಭು ಪಾಟೀಲ

ಎನ್.ಧರ್ಮಸಿಂಗ್ 8ನೇ ಪುಣ್ಯಸ್ಮರಣೋತ್ಸವ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 6:01 IST
Last Updated 28 ಜುಲೈ 2025, 6:01 IST
<div class="paragraphs"><p>ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ದಿ.ಧರ್ಮಸಿಂಗ್ ಅವರ ಪುಣ್ಯ ಸ್ಮರಣೆ ನಿಮಿತ್ಯ ಪುತ್ಥಳಿಗೆ ಕೆಕೆಆರ್ ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಪುಷ್ಪನಮನ ಸಲ್ಲಿಸಿದರು.</p></div>

ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ದಿ.ಧರ್ಮಸಿಂಗ್ ಅವರ ಪುಣ್ಯ ಸ್ಮರಣೆ ನಿಮಿತ್ಯ ಪುತ್ಥಳಿಗೆ ಕೆಕೆಆರ್ ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್, ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಪುಷ್ಪನಮನ ಸಲ್ಲಿಸಿದರು.

   

ಜೇವರ್ಗಿ: ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಅವರು ರಾಜ್ಯ ರಾಜಕಾರಣಕ್ಕೆ ಸುಮಾರು 5 ದಶಕ ಕಾಲ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ಭಾನುವಾರ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರ ಪುಣ್ಯಸ್ಮರಣೋತ್ಸವ ನಿಮಿತ್ಯ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಏಳು ಬಾರಿ ಗೆಲುವು ಸಾಧಿಸಿದ್ದ ಧರ್ಮಸಿಂಗ್ ಅವರು ಬೀದ‌ರ್ ಕ್ಷೇತ್ರದಿಂದ ಲೋಕ ಸಭೆಯನ್ನು ಪ್ರವೇಶಿಸಿದ್ದರು. ಡಿ. ದೇವರಾಜ ಅರಸು, ಆರ್. ಗುಂಡೂರಾವ್, ಎಸ್. ಬಂಗಾರಪ್ಪ, ಎಂ. ವೀರಪ್ಪ ಮೊಯಿಲಿ ಹಾಗೂ ಎಸ್‌.ಎಂ. ಕೃಷ್ಣ ನೇತೃತ್ವದ ಸರ್ಕಾರಗಳಲ್ಲಿ ಧರ್ಮಸಿಂಗ್ ಅವರು ಸೇವೆ ಸಲ್ಲಿಸಿದ್ದರು. ಆಡು ಮುಟ್ಟದ ಸೊಪ್ಪಿಲ್ಲ. ಧರ್ಮಸಿಂಗ್‌ ಅವರು ನಿರ್ವಹಿಸದ ಖಾತೆಗಳೇ ಇಲ್ಲ. ಎಂಬಂತೆ ಅಬಕಾರಿ, ಗೃಹ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಕಂದಾಯ ಹಾಗೂ ಲೋಕೋಪಯೋಗಿ ಸೇರಿದಂತೆ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು. ನಂತರ, ಮುಖ್ಯಮಂತ್ರಿ ಪದವಿಯನ್ನು ಅಲಂಕರಿಸಿ ಜನಪ್ರಿಯ ಮುಖ್ಯಮಂತ್ರಿ ಎನಿಸಿದ್ದರು. ನಗರಸಭಾ ಸದಸ್ಯರಾಗಿ ಪ್ರಪ್ರಥಮ ಬಾರಿಗೆ ಸಾರ್ವಜನಿಕ ಜೀವನವನ್ನು ಪ್ರವೇಶಿಸಿದ ಧರ್ಮಸಿಂಗ್ ಅವರು ಐದೂವರೆ ದಶಕಗಳಿಗಿಂತಲೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದರು. ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಧರ್ಮಸಿಂಗ್‌ ಅವರು ಹೊಂದಿದ್ದ ಸ್ನೇಹ ಮತ್ತು ಒಡನಾಟ ಕೇವಲ ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲ, ರಾಷ್ಟ್ರ ರಾಜಕಾರಣದ ಗಮನವನ್ನೂ ಸೆಳೆದಿತ್ತು.ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಹಿಡಿದು ಅಧಿನಾಯಕರವರೆಗೆ ಎಲ್ಲರ ಪ್ರೀತಿ ಮತ್ತು ವಿಶ್ವಾಸಕ್ಕೆ ಪಾತ್ರರಾಗಿದ್ದ ಧರ್ಮಸಿಂಗ್‌ ಅವರು ಪ್ರತಿ ಪಕ್ಷಗಳ ಎಲ್ಲಾ ನಾಯಕರೂ ಕೂಡಾ ಗೌರವಿಸುವ ಹಾಗೂ ಮೆಚ್ಚುವ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ಹೇಳಿದರು.

ADVERTISEMENT

ಕೆಕೆಆರ್ ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್, ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್, ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಲಿಂಗ ರೆಡ್ಡಿ ಇಟಗಿ, ಯಡ್ರಾಮಿ ಬ್ಲಾಕ್ ಅಧ್ಯಕ್ಷ ರುಕುಂ ಪಟೇಲ ಇಜೇರಿ, ರಾಜಶೇಖರ ಸಾಹು ಸೀರಿ, ಗುರುಲಿಂಗಪ್ಪಗೌಡ ಮಾಲಿಪಾಟೀಲ, ಕಾಶೀಂ ಪಟೇಲ ಮುದಬಾಳ, ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಷಣ್ಮುಖಪ್ಪಗೌಡ ಹಿರೇಗೌಡ, ಬಹಾದ್ದೂರ ರಾಠೋಡ, ರವಿಚಂದ್ರ ಗುತ್ತೇದಾರ, ಸಕ್ರೆಪ್ಪಗೌಡ ಹರನೂರ, ಶಿವಕುಮಾರ ಕಲ್ಲಾ, ನೀಲಕಂಠ ಅವಂಟಿ, ಅಜ್ಜು ಲಕ್ಪತಿ, ಬೈಲಪ್ಪ ನೇದಲಗಿ, ಗುರು ಪಾಟೀಲ, ಶರಭು ಕಲ್ಯಾಣಿ ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.