ಯಾದಗಿರಿ: ‘ವಿದ್ಯಾರ್ಥಿಗಳಲ್ಲಿ ಇಂಗ್ಲಿಷ್ ಭಾಷೆ ಬಗ್ಗೆ ಭಯ ಇದೆ. ಅದನ್ನು ಉಪನ್ಯಾಸಕರು ಹೋಗಲಾಡಿಸಬೇಕಾದರೆ ಪಾಠದ ಸಾರಾಂಶವನ್ನು ಕಥೆಯ ರೂಪದಲ್ಲಿ ಇಲ್ಲವೆ ನಾಟಕದ ರೂಪದಲ್ಲಿ ಹೇಳಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಭಾಷೆ ಬಗ್ಗೆ ಇರುವ ಭಯ ದೂರವಾಗುತ್ತದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಕಾಂತ ಹಿಳ್ಳಿ ಹೇಳಿದರು.
ನಗರದ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯ ಉಪನ್ಯಾಸಕರಿಗಾಗಿ ಆಯೋಜಿಸಿದ್ದ ಫಲಿತಾಂಶ ಅಭಿವೃದ್ಧಿ ಮತ್ತು ಇಂಗ್ಲಿಷ್ ಭಾಷಾ ಬೋಧನೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಪ್ರಸ್ತುತ ಜಿಲ್ಲೆಯು ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದೆ. ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಅದಕ್ಕಾಗಿ ಜಿಲ್ಲೆಯ ಎಲ್ಲ ಉಪನ್ಯಾಸಕರು ಛಲದಿಂದ ಪ್ರಯತ್ನಪಟ್ಟರೆ ಫಲಿತಾಂಶದಲ್ಲಿ ಜಿಲ್ಲೆ ಉನ್ನತ ಸ್ಥಾನ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದರು.
‘ಕಲಾ ವಿಭಾಗದ ಹೆಚ್ಚಿನ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯಲ್ಲಿಯೇ ಅನುತ್ತೀರ್ಣರಾಗುತ್ತಿದ್ದಾರೆ. ಇದಕ್ಕೆ ಅನೇಕ ಕಾರಣಗಳು ಇರಬಹುದು. ಅದಕ್ಕಾಗಿ ಉಪನ್ಯಾಸಕರು ಮಂಡಳಿ ವಿತರಣೆ ಮಾಡಿರುವ ಪ್ರತಿ ಪಾಠದ ಹ್ಯಾಂಡ್ ಔಟ್ ಪಾಯಿಂಟ್ಸ್ಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದರ ಜೊತೆಗೆ ನಿತ್ಯ ವಿದ್ಯಾರ್ಥಿಗಳಿಗೆ ಮನೆಗೆಲಸ ನೀಡಬೇಕು’ ಎಂದರು.
ಸಂಪನ್ಮೂಲ ವ್ಯಕ್ತಿ ಡಾ.ರಾಜೇಂದ್ರ, ಸುರೇಶ ಹವಾಲ್ದಾರ್, ಶಾಂತಲಾ ಇದ್ದರು. ಉಪನ್ಯಾಸಕಿ ಜ್ಯೋತಿ ಎನ್.ಪಾಟೀಲ ಸ್ವಾಗತಿಸಿದರು. ನಾಮದೇವ ವಾಟ್ಕರ್ ನಿರೂಪಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.