ಶಹಾಪುರ: ತಾಲ್ಲೂಕಿನಲ್ಲಿ ಭಾನುವಾರದ ಉತ್ತಮ ಮಳೆಯಿಂದ ಉಲ್ಲಾಸಗೊಂಡಿರುವ ರೈತರು ಸೋಮವಾರ ನಗರದ ಪ್ರಮುಖ ಖಾಸಗಿ ಬೀಜ ಮಾರಾಟ ಅಂಗಡಿಯ ಬಳಿ ವಿವಿಧ ಕಂಪನಿಯ ಹತ್ತಿ ಬೀಜಗಳನ್ನು ಖರೀದಿಸಲು ಮುಗಿಬಿದ್ದರು.
ಪ್ರಸಕ್ತ ಬಾರಿ ಮುಂಗಾರು ಸಕಾಲಕ್ಕೆ ಬಂದಿದೆ. ಈಗಾಗಲೇ ಹಿಂದೆ ಎರಡು ಉತ್ತಮ ಮಳೆಯಾಗಿದ್ದರಿಂದ ಜಮೀನು ಹದಗೊಳಿಸಿದ್ದರು. ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆಗೆ ಅನುಕೂಲವಾಗಿದೆ. ಹೀಗಾಗಿ ಹತ್ತಿಬೀಜ ಖರೀದಿಗೆ ತಾಲ್ಲೂಕಿನ ವಿವಿಧ ಗ್ರಾಮ ಹಾಗೂ ಸಿಂದಗಿ, ಜೇವರ್ಗಿ, ದೇವದುರ್ಗ ಮುಂತಾದ ತಾಲ್ಲೂಕುಗಳಿಂದ ರೈತರು ಆಗಮಿಸಿದ್ದರು ಎಂದು ಬಿತ್ತನೆ ಬೀಜ ಮಾರಾಟ ಅಂಗಡಿ ಮಾಲೀಕರು ತಿಳಿಸಿದರು.
‘ಸಕಾಲದಲ್ಲಿ ಹತ್ತಿ ಬೀಜ ಊರಿದರೆ ಒಂದೆರಡು ಉತ್ತಮ ಮಳೆಯಾದರೆ ಸಾಕು ಮುಂದೆ ಕಾಲುವೆ ನೀರು ಸಿಗುತ್ತದೆ ಎಂಬ ಆಶಾ ಭಾವನೆ ರೈತರದ್ದು’ ಎನ್ನುತ್ತಾರೆ ರೈತ ಶರಣಪ್ಪ.
ರೈತರ ಮುತ್ತಿಗೆ: ‘ನಗರದಲ್ಲಿ ಬಿತ್ತನೆ ಬೀಜದ ಅಂಗಡಿಯವರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರದಲ್ಲಿ ಹತ್ತಿ ಬೀಜ ಮಾರಾಟ ಮಾಡುತ್ತಿದ್ದಾರೆ’ ಎಂದು ಅರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಪ್ಪ ಆನೇಗುಂದಿ ನೇತೃತ್ವದಲ್ಲಿ ರೈತರು ಅಂಗಡಿಗಳಿಗೆ ಮುತ್ತಿಗೆ ಹಾಕಿದರು.
ಇದರಿಂದ ಕಸಿವಿಸಿಕೊಂಡ ಅಂಗಡಿ ಮಾಲೀಕರು ರೈತರ ಜೊತೆ ವಾದಕ್ಕೆ ಇಳಿದರು. ಕೊನೆಗೆ ಕೃಷಿ ಇಲಾಖೆಯ ಹಿರಿಯ ಅಧಿಕಾರಿ ಆಗಮಿಸಿ ನಿಗದಿತ ದರದಲ್ಲಿ ಮಾರಾಟ ಮಾಡುವಂತೆ ತಾಕೀತು ಮಾಡಿದರು.
ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಣ್ಣ ಟಪ್ಪೆದಾರ, ಪರಮಣ್ಣ ಪೂಜಾರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.