ಹುಣಸಗಿ: ‘ನಿತ್ಯ ಉತ್ತಮ ರೀತಿ ಕರ್ತವ್ಯ ನಿರ್ವಹಿಸುವ ಜೊತೆಗೆ ತಮ್ಮ ನೌಕರರ ಸಮಸ್ಯೆ ಪರಿಹರಿಸುವಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಮುಂದಾಗಲಿ’ ಎಂದು ಪಟ್ಟಣದ ಯುವ ಮುಖಂಡ ಚಂದ್ರಶೇಖರ ದಂಡಿನ್ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಬಳಿ ಭಾನುವಾರ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದಿಂದ ಹಮ್ಮಿಕೊಂಡ ಹುಣಸಗಿ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕಾಂತೇಶ ಹಲಗಿಮನಿ ಮಾತನಾಡಿ, ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಂಘದ ಕಾರ್ಯಚಟುವಟಿಕೆಯ ಮೂಲಕ ಹೆಚ್ಚು ಸದಸ್ಯರನ್ನು ಜೋಡಿಸಿಕೊಂಡು ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷ ಸಿದ್ದು ಮುದಗಲ್ಲ ಹಾಗೂ ಬಸವರಾಜ ಸಜ್ಜನ್ ಮಾತನಾಡಿ, ನೌಕರರ ಬೇಡಿಕೆಗಳು ಈಡೇರಲು ಸಂಘಟನೆ ಶಕ್ತಿ ಅಗತ್ಯ. ಈ ನಿಟ್ಟಿನಲ್ಲಿ ಶಾಲಾ ನೌಕರರ ಸಂಘ ಮಾದರಿಯಾಗಿ ಹೊರಹೊಮ್ಮಲಿ’ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಬಸನಗೌಡ ವಠಾರ, ಗುರು ಹುಲಕಲ್ ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಚನ್ನಯ್ಯಸ್ವಾಮಿ ಹಿರೇಮಠ, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ್ ನಿಂಬೂರೆ, ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ವಣಿಕ್ಯಾಳ, ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಬಸವರಾಜ ತೆಗ್ಗೆಳ್ಳಿ, ಅಶೋಕ ರಾಜನಕೋಳೂರು, ಶಿವುಕುಮಾರ ಬಂಡೋಳಿ, ರಮೇಶ ವಾಲಿ, ಭೀಮಣ್ಣ ವಾಲ್ಮೀಕಿ, ದಯಾನಂದ ಮಠ, ಸುರೇಶ, ಉಮಾಶ್ರೀ ವಠಾರ ಹಾಗೂ ಶಿಕ್ಷಕರು ಇದ್ದರು.
ಶಿಕ್ಷಕಿ ಸುವರ್ಣಾ ಹಿರೇಮಠ ಪ್ರಾರ್ಥಿಸಿದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮುಖಪ್ಪ ನುಚ್ಚಿ ಸ್ವಾಗತಿಸಿದರು. ಸಂಗಮೇಶ ನಾಗಲಿಕ ನಿರೂಪಿಸಿದರು. ಗಿರೀಶ ಸೂಳಿಬಾವಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.