ಯಾದಗಿರಿ: ‘ಕೃತಕ ಗರ್ಭಧಾರಣೆ ಮತ್ತು ಹಸಿರು ಮೇವು ಉತ್ಪಾದನೆಯಿಂದ ಕೃಷಿಕರ ಆದಾಯ ವೃದ್ಧಿಯಾಗುತ್ತದೆ’ ಎಂದು ಪಶುವೈದ್ಯ ಡಾ.ಸುಶೃತ್ ಹೇಳಿದರು.
ಕಲಿಕೆ ಸಂಸ್ಥೆ, ಕೆಎಂಎಫ್, ಕೆವಿಕೆ ಮತ್ತು ಪಶು ಸಂಗೋಪನಾ ಇಲಾಖೆ ವತಿಯಿಂದ ತಾಲ್ಲೂಕಿನ ಬೆಳಗೇರಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಸಿರು ಮೇವು ಉತ್ಪಾದನೆ ಮತ್ತು ಪಶು ಆರೋಗ್ಯ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
‘ಕಲಿಕಾ ಸಂಸ್ಥೆ ಹಾಗೂ ಕೆಎಂಎಫ್ ಜತೆಗೂಡಿ 2018-19ನೇ ಸಾಲಿನಲ್ಲಿ ಹಾಲು ಉತ್ಪಾದಕರ ಸಂಘ ರಚಿಸಲಾಗಿದೆ. ಕಳೆದ ಒಂದು ವರ್ಷದಿಂದ 50ಕ್ಕೂ ಹೆಚ್ಚು ಕುಟುಂಬಗಳು ಇದರ ಸದುಪಯೋಗ ಪಡೆದುಕೊಂಡಿವೆ’ ಎಂದರು.
‘ಈ ಕುಟುಂಬಗಳು ಪ್ರತಿವಾರ ₹ 800 ರಿಂದ ₹ 2200 ಮತ್ತು ತಿಂಗಳಿಗೆ ಕನಿಷ್ಠ ₹ 4800 ರಿಂದ ₹ 9 ಸಾವಿರ ಆದಾಯವನ್ನು ಕೇವಲ ಹಾಲಿನ ಉತ್ಪಾದನೆಯಿಂದ ಸಂಪಾದಿಸುತ್ತಿದ್ದಾರೆ. ಹೀಗಾಗಿ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ’ ಎಂದರು.
ತಾಲೂಕಿನ ಹವಾಮಾನಕ್ಕೆ ಗಿರ್, ಮುರ್ರಾ ತಳಿಯ ಹಸು ಮತ್ತು ಎಮ್ಮೆ ವಂಶವೃದ್ಧಿಗೆ ಕೇಂದ್ರ ಸರ್ಕಾರದ ಯೋಜನೆಯಡಿ ರಾಷ್ಟ್ರೀಯ ಕೃತಕ ಗರ್ಭಧಾರಣ ಕಾರ್ಯಕ್ರಮವು ಸೆಪ್ಟೆಂಬರ್ 15 ರಿಂದ 2020 ರ ಮಾರ್ಚ್ 15ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಕೃತಕ ಗರ್ಭಧಾರಣೆ ಮೂಲಕ ರಾಸುಗಳ ತಳಿ ಉನ್ನತೀಕರಣ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಕಲಿಕೆ ಸಂಸ್ಥೆ ಉಪನಿರ್ದೇಶಕ ಪ್ರಕಾಶ ಕಾಮತ್, ಕಾರ್ಯಕ್ರಮ ಅಧಿಕಾರಿಗಳಾದ ಆನಂದ ಬೆಂಗೇರಿ, ಅರುಣಕುಮಾರ ಶಿವರಾಯ, ಸಂದೀಪ ಚವಾಣ್, ಜೀವನೋಪಾಯ ಕಾರ್ಯಕ್ರಮ ಸಂಯೋಜಕರಾದ ಉಮೇಶ ಕಟ್ಟಿಮನಿ, ಮಂಜುನಾಥ ವಿಶ್ವಕರ್ಮ, ಶಾಂತಗೌಡ ಬಿರಾದಾರ, ಶಿವಕುಮಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.