ಹುಣಸಗಿ: ‘ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಉದಾಸೀನ ಮಾಡದೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು’ ಎಂದು ಹುಣಸಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಧರ್ಮರಾಜ ಹೊಸಮನಿ ಸಲಹೆ ನೀಡಿದರು.
ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯು ಇಲ್ಲಿನ ಮಾತೋಶ್ರೀ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಹುಣಸಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
‘ತಾಲ್ಲೂಕಿನ ಬಹುತೇಕ ಜನರು ನರರೋಗ, ಹೃದಯ ಸಂಬಂಧಿ ಹಾಗೂ ಮೂತ್ರಪಿಂಡ ಕಾಯಿಲೆ ಇದ್ದರೂ ಅಲಕ್ಷ್ಯ ಮಾಡುತ್ತಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಕನಿಷ್ಠ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಹೇಳಿದರು.
ಹೃದಯ ರೋಗ ತಜ್ಞ ಡಾ. ಹನುಮಂತ ಮಾತನಾಡಿ,‘ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ, ರೋಗ ಬಾರದಂತೆ ಮುಂಜಾಗ್ರತೆ ವಹಿಸುವುದು ಸೂಕ್ತ’ ಎಂದು ಹೇಳಿದರು.
ಶಿಬಿರದ ಆಯೋಜಕ ಹುಣಸಗಿ ಜಿ.ಪಂ.ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಮಾತನಾಡಿ,‘ತಾಲ್ಲೂಕಿನ ಜನರ ಆರೋಗ್ಯದ ಕಾಳಜಿಯಿಂದಾಗಿ ಕಳೆದ ಮೂರು ವರ್ಷಗಳಿಂದ ಶಿಬಿರ ಆಯೋಜಿಸುತ್ತ ಬರಲಾಗಿದೆ. ಶಸ್ತ್ರ ಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ಬೆಂಗಳೂರಿಗೆ ಹೋಗಿ ಬರಲು ಬಸ್ ವೆಚ್ಚವನ್ನು ಭರಿಸಲಾಗುವುದು’ ಎಂದರು.
ವೈದ್ಯ ಡಾ. ಯೂಸೂಫ್ ಡೆಕ್ಕನ್, ಮುಖಂಡರಾದ ಮೇಲಪ್ಪ ಗುಳಗಿ, ಎಎಸ್ಐ ಮೌನೇಶ ಬಡಿಗೇರ, ಈರಪ್ಪ ದೇಸಾಯಿ, ಎಂ.ಎಸ್. ಚಂದಾ, ಎಸ್.ಎಂ.ವಿರಕ್ತಮಠ, ಬಸಣ್ಣ ಬಾಲಗೌಡರ್, ಹಳ್ಳೆಪ್ಪ ಗುತ್ತೇದಾರ್ ಹಾಗೂ ಅಮರಪ್ಪ ಬಂಡೋಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.