ಹುಣಸಗಿ: ತಾಲ್ಲೂಕಿನ ಬರದೇವನಾಳ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ಶಿವಮ್ಮ ಕರಿಬಾವಿ ಅಧ್ಯಕ್ಷತೆಯಲ್ಲಿ ನಡೆಯಿತು.
ಅಭಿವೃದ್ಧಿ ಅಧಿಕಾರಿ ಮಲ್ಲೇಶಪ್ಪಗೌಡ ಮಾಲಿಪಾಟೀಲ್ ಮಾತನಾಡಿ, 2022-23 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿಯಲ್ಲಿ ₹43 ಲಕ್ಷ ಅನುದಾನ ಮೀಸಲಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಕ್ರಿಯಾ ಯೋಜನೆ ಸಿದ್ದಪಡಿಸಿಕೊಳ್ಳಬೇಕಿದೆ. ಅಗತ್ಯವಿರುವ ಕೆಲಸ ಕಾರ್ಯಗಳ ಕುರಿತು ಚರ್ಚಿಸಬೇಕಿದೆ ಎಂದು ಸಭೆಯ ಗಮನಕ್ಕೆ ತಂದರು.
ಈಗಾಗಲೇ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳಿಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಗ್ರಾಮ ವ್ಯಾಪ್ತಿಯ ಕಾರ್ಮಿಕರಿಗೆ ಆದ್ಯತೆಯಂತೆ ಕೆಲಸ ನೀಡಲಾಗುತ್ತಿದೆ ಎಂದು ಸಭೆಯಲ್ಲಿ ಹೇಳಿದರು.
ಅಮೃತ ಗ್ರಾಮ ವಸತಿ ಯೋಜನೆಯಲ್ಲಿ ಈಗಾಗಲೇ 1343 ಅರ್ಜಿಗಳು ಸ್ವಿಕೃತಗೊಂಡಿದ್ದು ಇನ್ನೂ ಯಾರು ನಿವೇಶನಗಳಿಗಾಗಿ ಅರ್ಜಿಯನ್ನು ಸಲ್ಲಿಸಿರುವದಿಲ್ಲವೋ ಅವರು ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.
ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ ಕರಿಬಾವಿ ಮಾತನಾಡಿ, ಈಗಾಗಲೇ ಮಳೆಗಾಲ ಆರಂಭವಾಗಿದ್ದು ಸಾಂಕ್ರಾಮಿಕ ರೋಗಗಳು ಹರಡದಂತೆ, ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಕಟ್ಟು ನಿಟ್ಟಾಗಿ ಹೇಳಿದರು. ಸದಸ್ಯರು ಕೂಡಾ ತಮ್ಮ ವಾರ್ಡ್ಗಳ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಹರಿಸಿ ಸ್ವಚ್ಛತೆಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ಶಾಂತಗೌಡ ಮಾಲಿಗೌಡ್ರ, ಹಣಮಂತ್ರಾಯ ಸಾಳಿ, ಹುಲಗಪ್ಪ ಬಿರಾದಾರ, ಖೀರಪ್ಪ, ಮಾಳಪ್ಪ, ಶಂಕರಗೌಡ ಮಾಲಿಪಾಟೀಲ, ಮುದಕಮ್ಮ ಪೊಲೀಸ್ಪಾಟೀಲ, ದೇವಮ್ಮ ಮಾಲಿಪಾಟೀಲ, ದ್ಯಾಮವ್ವ ಮಕಾಳಿ, ಇಂದಿರಾಬಾಯಿ, ಕಸ್ತೂರಿಬಾಯಿ, ಭೀಮಬಾಯಿ, ಹುಲಿಗೆಮ್ಮ, ಧನ್ನುಬಾಯಿ, ಎಸ್.ಎನ್ .ನಂದಿಕೋಲಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.