ADVERTISEMENT

‘ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜಾರೋಹಣ’

ಸ್ವಾತಂತ್ರ‍್ಯದ ಅಮೃತ ಮಹೋತ್ಸವ; ತಿರಂಗ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 2:56 IST
Last Updated 13 ಆಗಸ್ಟ್ 2022, 2:56 IST
ಯಾದಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿ.ಪಂ ಸಿಇಒ ಅಮರೇಶ ಆರ್. ನಾಯ್ಕ್ ಧ್ವಜಾರೋಹಣ ಪ್ರದರ್ಶಿಸಿದರು
ಯಾದಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿ.ಪಂ ಸಿಇಒ ಅಮರೇಶ ಆರ್. ನಾಯ್ಕ್ ಧ್ವಜಾರೋಹಣ ಪ್ರದರ್ಶಿಸಿದರು   

ಯಾದಗಿರಿ: 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸುತ್ತೋಲೆಯಂತೆ ಗ್ರಾಮೀಣ ಪ್ರದೇಶದ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಆರ್. ನಾಯ್ಕ್
ಹೇಳಿದರು.

ಯಾದಗಿರಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಆಗಸ್ಟ್ 13ರಿಂದ 15ರವರೆಗೆ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಹಿನ್ನಲೆ ನಡೆದ ಮನೆ ಮನೆಯಲ್ಲೂ ತಿರಂಗ ಅಭಿಯಾನದ ಪೂರ್ವ ಸಿದ್ಧತಾ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ರಾಷ್ಟ್ರ ಧ್ವಜ ವಿತರಿಸಿ ಮಾತನಾಡಿದರು.

ಧ್ವಜಕ್ಕೆ ಗೌರವ ತರುವ ನಿಟ್ಟಿನಲ್ಲಿ ಶಿಸ್ತಿನಿಂದ ಅಚ್ಚುಕಟ್ಟಾಗಿ ಜಿಲ್ಲೆಯ ಜನರು ಸಕ್ರಿಯವಾಗಿ ಭಾಗವಹಿಸಿ ಈ ಅಭಿಯಾನ ಯಶಸ್ವಿಗೊಳಿಸಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಬೇಕು
ಎಂದರು.

ADVERTISEMENT

ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಪಂಚಾಯತ್‌ ರಾಜ್, ಸ್ವಸಹಾಯ ಒಕ್ಕೂಟಗಳು, ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪಕೇಂದ್ರ, ಸಹಕಾರ ಸಂಘಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಸೇವಕರು, ಶಿಕ್ಷಕರು, ಸರ್ಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಅರೆ ಸರ್ಕಾರಿ ನೌಕರರು, ಸಾರ್ವಜನಿಕರು ತಮ್ಮ ಕುಟುಂಬ ವರ್ಗದವರೊಂದಿಗೆ, ಶಾಲಾ–ಕಾಲೇಜು ವಿದ್ಯಾರ್ಥಿಗಳು ಒಳಗೊಂಡ ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ರಾಷ್ಟ್ರಧ್ವಜ ಹಾರಿಸುವಾಗ ಹಾಗೂ
ಇಳಿಸುವಾಗ ಅನುಸರಿಸಬೇಕಾದ ನಿರ್ದಿಷ್ಟ ಕ್ರಮಗಳ ಮಾಹಿತಿಯನ್ನು ಶಾಲೆ, ಕಾಲೇಜುಗಳ ಎಲ್ಲಾ ಮಕ್ಕಳಿಗೆ ತಿಳಿಸಬೇಕು ಎಂದರು.

ಈ ವೇಳೆ ಯಾದಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಖಾಲಿದ್ ಅಹ್ಮದ್, ತಾಲ್ಲೂಕು ಪಂಚಾಯಿತಿ ಲೆಕ್ಕಾಧಿಕಾರಿ ಕಾಶಿನಾಥ, ಯೋಜನಾ ನಿರ್ದೇಶಕ ಶಶಿಧರ
ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಶಿವರಾಯ, ಟಾಟಾ ಕಲಿಕಾ ಟ್ರಸ್ಟ್ ಹಾಗೂ ಶಿಕ್ಷಣ ಫೌಂಡೆಷನ್ ಸಂಸ್ಥೆಯ ಸಿಬ್ಬಂದಿ, ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳ ಮುಖ್ಯ ಗುರುಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

‘ಅಭಿಯಾನ ಯಶಸ್ವಿಗೊಳಿಸಿ’

ನಾರಾಯಣಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಮನೆ ಮನೆಯಲ್ಲೂ ತಿರಂಗ ಅಭಿಯಾನ ಯಶಸ್ವಿಗೊಳಿಸಲು ಪ್ರತಿಯೊಬ್ಬರು ಆ.13 ರಿಂದ ಆ.15ರ ವರೆಗೆ ಮನೆಗಳ ಮೇಲೆ ಧ್ವಜಗಳನ್ನು ಹಾರಿಸುವುದರ ಮೂಲಕ ರಾಷ್ಟ್ರಾಭಿಮಾನ ಪ್ರದರ್ಶಿಸಬೇಕು ಎಂದು ಪಿಡಿಒ ಶರಣಬಸವ ಬಿರಾದಾರ ಹೇಳಿದರು.

ಇಲ್ಲಿನ ಗ್ರಾ.ಪಂ ಕಚೇರಿ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ, ಸಾರ್ವಜನಿಕರಿಗೆ ರಾಷ್ಟ್ರಧ್ವಜಗಳನ್ನು ವಿತರಿಸಿ ಅವರು ಮಾತನಾಡಿದರು.

ಗ್ರಾ.ಪಂ ಕಚೇರಿಯಲ್ಲಿ ಬಾವುಟಗಳು ಲಭ್ಯವಿದ್ದು, ಪ್ರತಿ ಧ್ವಜಕ್ಕೆ ₹25 ನಿಗದಿಗೊಳಿಸಲಾಗಿದೆ. ಸಾರ್ವಜನಿಕರು ಧ್ವಜಗಳನ್ನು ಖರೀದಿಸಬಹುದು ಎಂದು ತಿಳಿಸಿದರು.

ಇಸಿಒ, ನೋಡಲ್ ಅಧಿಕಾರಿ ಶಿವಕುಮಾರ ಹಿರೇಮಠ, ಆಂಜನೇಯ ದೊರೆ, ಸಿದ್ದಪ್ಪ ಕಮಲಾಪುರ, ಸುವರ್ಣಪ್ಪ ಕೂಲಬಾವಿ, ರಮೇಶ ಗೌಡ್ರು, ಬಸವರಾಜ ಗೌಡ್ರು, ವೀರೇಶ ಗಣಾಚಾರಿ, ಹುಸೇನ ಸಾಬ್, ವಿರೇಶ ಹಿರೇಮಠ, ಚಂದಪ್ಪ, ಜ್ಯೋತಿ, ನಿರ್ಮಲಾ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.