ಜೇವರ್ಗಿ: ‘ಪರಿಶಿಷ್ಟ ಜಾತಿ ಒಳ ಮೀಸಲಾತಿಗಾಗಿ ಮೇ 5 ರಿಂದ 17ರ ವರೆಗೆ ನಡೆಯುವ ಮನೆ ಮನೆ ಸಮೀಕ್ಷೆ ವೇಳೆ ಕುಟುಂಬದ ಯಾರಾದರೂ ಒಬ್ಬರು ಗಣತಿದಾರರಿಗೆ ಆಧಾರ್ ಕಾರ್ಡ್ ಅಥವಾ ಕುಟುಂಬದ ಪಡಿತರ ಚೀಟಿಯನ್ನು ತೋರಿಸಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಂಗಣಗೌಡ ಪಾಟೀಲ ತಿಳಿಸಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿಯ ಒಳಪಂಗಡಗಳ ಸಮೀಕ್ಷೆಯ ಪ್ರಯುಕ್ತ ಗಣತಿದಾರರು ಹಾಗೂ ಮೇಲ್ವಿಚಾರಕರಿಗಾಗಿ ಆಯೋಜಿಸಲಾಗಿದ್ದ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಗಾಗಿಯೇ ಈ ಸಮೀಕ್ಷೆ ನಡೆಯಲಿರುವುದರಿಂದ ಪ್ರತಿಯೊಬ್ಬರೂ ಗೊತ್ತಿದ್ದರೆ ಉಪಜಾತಿಯನ್ನು ಸಮೀಕ್ಷೆ ವೇಳೆ ನಮೂದಿಸಬೇಕು. ಪರಿಶಿಷ್ಟ ಜಾತಿಯಲ್ಲಿ ಕೇಂದ್ರ ಸರ್ಕಾರ 101 ಉಪಜಾತಿಗಳನ್ನು ಗುರುತಿಸಿದೆ. ಇವುಗಳಲ್ಲಿ ಯಾವುದೇ ಉಪಜಾತಿಗೆ ಸೇರಿದ್ದರೂ ಅದನ್ನು ನಮೂದಿಸಬೇಕು’ ಎಂದು ಹೇಳಿದರು.
ಇದಕ್ಕೂ ಮುನ್ನ ತಾಲ್ಲೂಕು ಪಂಚಾಯಿತಿ ಇಒ ರವಿಚಂದ್ರರೆಡ್ಡಿ ಲಕ್ಕುಂಡಿ ಶಿಬಿರ ಉದ್ಘಾಟಿಸಿದರು. ಗ್ರೇಡ್-2 ತಹಶೀಲ್ದಾರ್ ಗೋಪಾಲ ಕಪೂರ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಳ್ಳಿ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.