ಯಾದಗಿರಿ: ‘ಕನ್ನಡ ಕೇವಲ ರಾಜ್ಯ ಭಾಷೆಯಾಗಿ ಉಳಿಸಲು ಹೆಣಗುವಂತಹ ಸ್ಥಿತಿ ಬಂದೊದಗಿದೆ. ಆದರೆ, ಕನ್ನಡ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಹೊಣೆ ಸಮಸ್ತ ಕನ್ನಡಿಗರ ಹೊಣೆಯಾಗಿದೆ’ ಎಂದು ಹೆಡಗಿಮದ್ರಾ ಮಠದ ಶಾಂತವೀರ ಪಂಡಿತಾರಾಧ್ಯ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಸಮೀಪದ ವಡ್ನಳ್ಳಿ ಗ್ರಾಮದ ಆಂಜಿನೇಯ ದೇವಸ್ಥಾನ ಆವರಣದಲ್ಲಿ ಭಾನುವಾರ ಕನ್ನಡ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಗ್ರಾಮ ಘಟಕ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಕನ್ನಡ ರಕ್ಷಿಸುವುದು, ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವುದು ಕೇವಲ ಕನ್ನಡಪರ ಸಂಘಟನೆಗಳ ಕೆಲಸವಲ್ಲ. ಅದು ಪ್ರತಿಯೊಬ್ಬ ಕನ್ನಡಿಗರ ಧ್ಯೇಯವಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ರಕ್ಷಣ ವೇದಿಕೆ ಕಾರ್ಯ ಶ್ಲಾಘನೀಯವಾಗಿದೆ’ ಎಂದರು.
‘ಎಲ್ಲಿಯವರೆಗೆ ಕನ್ನಡ ಅನ್ನದ ಭಾಷೆಯಾಗಿ ರೂಪಗೊಳ್ಳುವುದೋ ಅಲ್ಲಿಯವರೆಗೆ ಕನ್ನಡ ಅಭಿವೃದ್ಧಿ ಕುಂಟುತ್ತಲೇ ಇರುತ್ತದೆ. ಕನ್ನಡ ರಕ್ಷಣೆ ಕೇವಲ ಘೋಷಣೆಗಳಿಂದ ಸಾಧ್ಯವಿಲ್ಲ. ಮನೆಯ ಕಂದಮ್ಮಗಳಿಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಕೆಯಲ್ಲಿ ತೊಡಗಿಸುವುದರಿಂದ ಮಾತ್ರ ಕನ್ನಡ ಸದೃಢವಾಗಿಸಬಹುದು’ ಎಂದರು.
ಸಿದ್ದು ನಾಯಕ ಹತ್ತಿಕುಣಿ, ಶಾಂತಯ್ಯ ಸ್ವಾಮಿ ಹಿರೇಮಠ, ಸಿದ್ರಾಮರೆಡ್ಡಿಗೌಡ ಮಾಲಿ ಪಾಟೀಲ್, ಸಿದ್ದಪ್ಪ ಕ್ಯಾಸಪನಳ್ಳಿ, ಅಮರಣ್ಣಗೌಡ ಸಾಹುಕಾರ, ಲಿಂಗಾರೆಡ್ಡಿಗೌಡ, ಚಂದ್ರಾಮಪ್ಪ ಹಂಪಿನ್, ಭೀಮು ಬಸವಂತಪುರ, ಮಲ್ಲು ಹತ್ತಿಕುಣಿ, ಹನುಮೇಶ ವಡ್ನಳ್ಳಿ, ದೇವು ನಾಯಕ ಹಂಪಿನ, ಮೊಗಲಯ್ಯ ಹೊಸಳ್ಳಿ, ಭೀಮರೆಡ್ಡಿ ಮಾಪಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.