ADVERTISEMENT

ಮಲ್ಲಾ-ಕೆಂಭಾವಿ ರಸ್ತೆ ಹಾಳು: ಪ್ರಯಾಣಿಕರ ಪರದಾಟ

ಟೆಂಡರ್ ಮುಗಿದರೂ ಆರಂಭವಾಗದ ಕೆಲಸ

ಪವನ ಕುಲಕರ್ಣಿ
Published 19 ಜೂನ್ 2025, 5:40 IST
Last Updated 19 ಜೂನ್ 2025, 5:40 IST
ತಗ್ಗು ದಿನ್ನೆಗಳಿದ ಕೂಡಿದ ಕೆಂಭಾವಿ-ಮಲ್ಲಾ ರಸ್ತೆ
ತಗ್ಗು ದಿನ್ನೆಗಳಿದ ಕೂಡಿದ ಕೆಂಭಾವಿ-ಮಲ್ಲಾ ರಸ್ತೆ   

ಕೆಂಭಾವಿ: ಮಲ್ಲಾ-ಕೆಂಭಾವಿ ನಡುವಿನ 11 ಕಿ.ಮೀ ರಸ್ತೆಯಲ್ಲಿ 4 ಕಿ.ಮೀ ರಸ್ತೆ ದುರಸ್ತಿಯಾಗಿದ್ದು ಇನ್ನುಳಿದಿದ್ದು ಸಂಪೂರ್ಣ ಹದಗೆಟ್ಟಿದೆ. ರಸ್ತೆ ತಗ್ಗು ದಿನ್ನೆಗಳಿಂದ ಕೂಡಿದ್ದರೂ ದುರಸ್ತಿ ಮಾಡಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದು ಜನ ತೊಂದರೆ ಅನುಭವಿಸುತ್ತಿದ್ದಾರೆ. 

ರಸ್ತೆ ದುರಸ್ತಿ ಹಾಗೂ ಅಭಿವೃದ್ಧಿಗೆ ಪ್ರತಿವರ್ಷ ಸರ್ಕಾರ ಹಣ ನೀಡುತ್ತಿದ್ದರೂ ನೆಪಮಾತ್ರಕ್ಕೆ ತಾತ್ಕಾಲಿಕವಾಗಿ ದುರಸ್ತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಹಾಳಾಗುತ್ತದೆ. ಈಗಾಗಲೇ ಈ ರಸ್ತೆ ಕಾಮಗಾರಿಗೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಆದರೆ ಗುತ್ತಿಗೆದಾರರು ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ.

‘ಕೇವಲ 6 ಕಿ.ಮೀ ರಸ್ತೆ ದುರಸ್ತಿಗೆ ಸರ್ಕಾರ ಪ್ರತಿವರ್ಷ ₹50 ಲಕ್ಷದಿಂದ ₹1ಕೋಟಿ ವರೆಗೆ ಅನುದಾನ ನೀಡುತ್ತಿದೆ. ಹಣ ಖರ್ಚಾದರೂ ರಸ್ತೆ ಅಭಿವೃದ್ಧಿಯಾಗಿಲ್ಲ. ಯಾದಗಿರಿ, ಕಲಬುರಗಿ, ವಿಜಯಪುರ ಮೂರು ಜಿಲ್ಲೆಗಳ ಸಂಪರ್ಕ ಕೊಂಡಿಯಾಗಿರುವ ಈ ರಸ್ತೆ ಅಭಿವೃದ್ಧಿ ಪಡಿಸಿದರೆ ಬಹಳಷ್ಟು ಜನರಿಗೆ ಅನುಕೂಲವಾಗುತ್ತದೆ. ಸುತ್ತುವರೆದು ಸುರಪುರ ಜಿಲ್ಲಾ ಕೇಂದ್ರಕ್ಕೆ ತೆರಳುವಂತಾಗಿದೆ. ಭತ್ತ ಹಾಗೂ ಮರಳಿನ ಲಾರಿಗಳು ಈ ರಸ್ತೆಯಲ್ಲಿ ಹೆಚ್ಚಾಗಿ ಓಡಾಡುತ್ತಿದ್ದು ಮುಂಬರುವ ದಿನಗಳಲ್ಲಿ ಇನ್ನಷ್ಟು ಹಾಳಾಗುವ ಭೀತಿ ಎದುರಾಗಿದೆ. ಶೀಘ್ರದಲ್ಲಿ ರಸ್ತೆ ದುರಸ್ತಿ ಕಾರ್ಯ ಮಾಡಬೇಕು’ ಎಂದು ಸ್ಥಳೀಯ ನಿವಾಸಿ ಶ್ರೀಶೈಲ ಕಾಚಾಪುರ ಒತ್ತಾಯಿಸಿದ್ದಾರೆ.

ADVERTISEMENT
ರಸ್ತೆ ದುರಸ್ತಿಗೆ ಟೆಂಡರ್ ಕರೆದು ತಿಂಗಳುಗಳೇ ಕಳೆದರೂ ಕಾಮಗಾರಿ ಮಾತ್ರ ಪ್ರಾರಂಭವಾಗದಿರುವುದು ಹಲವು ಅನುಮಾನಕ್ಕೆ ಹೇತುವಾಗಿದೆ
ಸಂಗಣ್ಣ ಸಾಹು ತುಂಬಗಿ ಬಿಜೆಪಿ ಮುಖಂಡ
ರಸ್ತೆ ಕಾಮಗಾರಿಗೆ ಟೆಂಡರ್ ಆಗಿದೆ. ಮಳೆಗಾಲ ಇರುವುದರಿಂದ ತಡೆಹಿಡಿಯಲಾಗಿದೆ. ತಗ್ಗು ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಲಾಗುವುದು. ಮಳೆ ನಿಂತ ನಂತರ ಕಾಮಗಾರಿ ಪ್ರಾರಂಭಿಸಲಾಗುವುದು
ಎಸ್.ಜಿ.ಪಾಟೀಲ ಪಿಡಬ್ಲ್ಯೂಡಿ ಎಇಇ

‘ಹಣ ದುರ್ಬಳಕೆ’

ಈ ಹಿಂದಿನ ಸರ್ಕಾರ ಮಲ್ಲಾ-ನಾರಾಯಣಪೂರ ರಾಜ್ಯ ಅಭಿವೃದ್ಧಿಗೆ ಬಿಡುಗಡೆ ಮಾಡಿದ ಹಣ ದುರ್ಬಳಕೆ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರತಿವರ್ಷ ಶಾಸಕರ ಅನುದಾನದಲ್ಲಿ ರಸ್ತೆ ದುರಸ್ತಿಗೆ ಹಣ ವ್ಯಯ ಮಾಡುತ್ತಿದ್ದರೂ ಗುತ್ತಿಗೆದಾರರ ಜೇಬು ತುಂಬಲು ಮಾತ್ರ ಅನುಕೂಲವಾಗಿದೆ ಎಂಬ ಮಾತುಗಳು ಜನರಿಂದ ಕೇಳಿ ಬರುತ್ತಿವೆ. ಸಧ್ಯ ಮಳೆಗಾಲ ಇರುವುದರಿಂದ ರಸ್ತೆಯ ತಗ್ಗುಗಳಲ್ಲಿ ನೀರು ತುಂಬಿಕೊಂಡು ರಸ್ತೆ ಮತ್ತಷ್ಟು ಹಾಳಾಗುವುದರ ಜತೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈಗಾಲಾದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ವಿಶೇಷ ಗಮನ ಹರಿಸಿ ಗುತ್ತಿಗೆ ಪಡೆದವರಿಂದ ಶೀಘ್ರ ಕಾಮಗಾರಿ ಮಾಡಿಸಬೇಕು ಎನ್ನುವುದು ಜನ ಪ್ರಯಾಣಿಕರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.