ಕೆಂಭಾವಿ: ಪಟ್ಟಣದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಗುತ್ತಿಬಸವೇಶ್ವರ ಇಂಡಿ ಏತ ನೀರಾವರಿ ಜಾಕ್ವೆಲ್ ಪ್ರದೇಶಕ್ಕೆ ಸೋಮವಾರ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ ಮೋಹನರಾಜ್ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಲಮಟ್ಟಿ ಮತ್ತು ನಾರಾಯಣಪುರ ಕೃಷ್ಣಾ ಅಣೆಕಟ್ಟುಗಳು ಈ ಭಾಗದ ರೈತರ ಜೀವನಾಡಿಗಳು. ಇದರ ನಿರ್ವಹಣೆ ಮತ್ತು ಹೊಸ ಯೋಜನೆಗಳನ್ನು ರೈತರಿಗೆ ತಲುಪಿಸಲು ನಮ್ಮ ಇಲಾಖೆ ಬದ್ಧವಾಗಿದ್ದು, ಇದಕ್ಕೆ ಯಾವತ್ತೂ ಅನುದಾನದ ಕೊರತೆ ಎದುರಾಗದು’ ಎಂದು ಹೇಳಿದರು.
‘ಅಗತ್ಯವಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳಾಗುತ್ತದೆ’ ಎಂದ ಅವರು ‘ನಾರಾಯಣಪುರ ಎಡದಂಡೆ ಕಾಲುವೆ ಭಾಗವನ್ನು ಪರಿಶೀಲಿಸಿದ್ದು, ಕೆಲವೆಡೆ ಸಣ್ಣಪುಟ್ಟ ಕೆಲಸಗಳಿದ್ದು ವಾರ್ಷಿಕ ನಿರ್ವಹಣೆಯಲ್ಲಿ ಅವುಗಳನ್ನು ದುರಸ್ತಿಗೊಳಿಸಲಾಗುವುದು. ಪೀರಾಪುರ ಏತನೀರಾವರಿ ಯೋಜನೆಯ ಒಂದನೇ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತದೆ’ ಎಂದು ಹೇಳಿದರು.
ಕೆಂಭಾವಿ ಮುಖ್ಯ ರಸ್ತೆಯ ಮೇಲೆ ಹಾದುಹೋಗಿರುವ ಕಾಲುವೆ ಬ್ರಿಜ್ ದುರಸ್ತಿಗೊಳಿಸುವಂತೆ ಪುರಸಭೆ ಅಧ್ಯಕ್ಷ ರಹೆಮಾನ ಪಟೇಲ್ ಯಲಗೋಡ ಮನವಿ ಮಾಡಿದರು. ಬ್ರಿಜ್ ನಿರ್ವಹಣೆ ಯಾವ ಇಲಾಖೆಗೆ ಒಳಪಡುತ್ತದೆ ಎಂಬುದನ್ನು ಖಾತ್ರಿ ಪಡಿಸಿಕೊಂಡು ಕೆಲವೇ ದಿನಗಳಲ್ಲಿ ದುರಸ್ತಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಎಂ.ಡಿ ಹೇಳಿದರು.
ಏತ ನೀರಾವರಿ ಮೋಟರ್ಗಳು, 110 ಕೆವಿ ವಿದ್ಯುತ್ ಸ್ಥಾವರ, ಕಾಲುವೆಗೆ ನೀರುಹರಿಸುವ ಪೈಪ್ಲೈನ್ ಸೇರಿದಂತ ಕಾಲುವೆಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ರಾಂಪೂರ ಮುಖ್ಯ ಎಂಜಿನಿಯರ್ ರವಿಕುಮಾರ, ಭೀ.ಗುಡಿ ಮುಖ್ಯ ಎಂಜಿನಿಯರ್ ಪ್ರೇಮಸಿಂಗ್, ಎಸ್.ಇ. ಮಂಜುನಾಥ, ಇ.ಇ. ಬಾಲಕೃಷ್ಣ, ಎಇಇ ವೆಂಕಟೇಶ, ಪುರಸಭೆ ಸದಸ್ಯರಾದ ಮಲ್ಲಿನಾಥಗೌಡ ಪೊಲೀಸ್ ಪಾಟೀಲ, ರವಿ ಸೊನ್ನದ ಇದ್ದರು.
‘ಕಾಲುವೆಗಳ ನಿರ್ವಹಣೆಗೆ ಶೇ 10ರಷ್ಟು ಅನುದಾನ’
ನೀರಾವರಿಗೆ ಮೀಸಲಿಟ್ಟ ಶೇ 10ರಷ್ಟು ಅನುದಾನ ಪ್ರತಿವರ್ಷ ಕಾಲುವೆಗಳ ನಿರ್ವಹಣೆಗೆ ಖರ್ಚು ಮಾಡಲಾಗುತ್ತಿದೆ. ಕಾಲುವೆಯ ಕೊನೆ ಭಾಗದ ರೈತರಿಗೂ ನೀರು ತಲುಪಿಸುವುದು ಇಲಾಖೆಯ ಉದ್ದೇಶ. ಮುಂದಿನ ತಿಂಗಳ ಅಂತ್ಯದಲ್ಲಿ ಪೀರಾಪುರ ಏತ ನೀರಾವರಿಯ 2ನೇ ಹಂತವನ್ನು ಪ್ರಾರಂಭ ಮಾಡಲಾಗುತ್ತಿದ್ದು, ಸ್ಕಾಡಾ ನೆರವಿನಿಂದ ರೈತರಿಗೆ ಸಮರ್ಪಕವಾಗಿ ನೀರು ತಲುಪಿಸಲಾಗುವುದು ಎಂದು ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಮೋಹನರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.