ADVERTISEMENT

ಶಹಾಪುರ | ಕಾಲೇಜಿಗೆ ಬೋಧಕರು ಚಕ್ಕರ್‌: ಸಚಿವರಿಂದ ಪ್ರಾಚಾರ್ಯ ತರಾಟೆಗೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2024, 15:36 IST
Last Updated 13 ಸೆಪ್ಟೆಂಬರ್ 2024, 15:36 IST
ಶಹಾಪುರ ನಗರದ ಸರ್ಕಾರಿ ಪದವಿ ಕಾಲೇಜಿಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್. ರಾಂಪುರೆ ಉಪಸ್ಥಿತರಿದ್ದರು
ಶಹಾಪುರ ನಗರದ ಸರ್ಕಾರಿ ಪದವಿ ಕಾಲೇಜಿಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್. ರಾಂಪುರೆ ಉಪಸ್ಥಿತರಿದ್ದರು   

ಶಹಾಪುರ: ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಿಢೀರ್ ಭೇಟಿ ಜತೆಗೆ ಬೋಧಕರು ಕಾಲೇಜಿಗೆ ಚಕ್ಕರ್‌ ಹೊಡೆದಿರುವುದನ್ನು ಕಂಡು ಉಪಸ್ಥಿತರಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್ ರಾಂಪುರೆ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಕಾಲೇಜು ಸಿಬ್ಬಂದಿ ಬಗ್ಗೆ ವಿದ್ಯಾರ್ಥಿಗಳಿಂದ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಅನಿರೀಕ್ಷಿತವಾಗಿ ಭೇಟಿ ನೀಡಿದಾಗ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ನಿಂತಿರುವುದನ್ನು ಗಮನಿಸಿ ಅವರ ಜೊತೆ ಚರ್ಚಿಸಿದಾಗ ‘ನಿಗದಿಪಡಿಸಿದ ಸಮಯಕ್ಕೆ ಬೋಧಕರು ಕಾಲೇಜಿಗೆ ಬರುವುದಿಲ್ಲ. ಚಕ್ಕರ್‌ ಹೊಡೆಯುವುದು ಸಾಮಾನ್ಯವಾಗಿದೆ’ ಎಂದು ಸಚಿವರ ಮುಂದೆ ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಆಗ ಸಚಿವರು, ‘ಕಾಲೇಜಿಗೆ ಸರಿಯಾದ ಸಮಯಕ್ಕೆ ಬಾರದೇ ಇರುವ ಬೋಧಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಕಾಲೇಜಿನಲ್ಲಿರುವ ಅಗತ್ಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಲುವಾಗಿ ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ. ಬೋಧಕರು ಕಾಲೇಜಿಗೆ ಬರದಿದ್ದರೆ ವಾಪಸ್ಸು ಕಳುಹಿಸಿ. ಇನ್ನೊಂದು ಬಾರಿ ಕಾಲೇಜು ಕುರಿತು ಯಾವುದೇ ರೀತಿಯ ದೂರು ಬಂದರೆ ಸಹಿಸುವುದಿಲ್ಲ’ ಎಂದು ಪ್ರಾಚಾರ್ಯರಿಗೆ ಎಚ್ಚರಿಕೆ ನೀಡಿದರು.

ADVERTISEMENT

ಸಚಿವರು ಕಾಲೇಜಿಗೆ ದಿಢೀರ್ ಭೇಟಿ ನೀಡಿದಾಗ ತರಗತಿಗಳು ನಡೆದಿರಲಿಲ್ಲ. ‘ಸದ್ಯ ಪದವಿ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿವೆ. ನಂತರದ ದಿನಗಳಲ್ಲಿ ತರಗತಿಗಳು ನಡೆಯುತ್ತವೆ. ಆ ಹಿನ್ನೆಲೆಯಲ್ಲಿ ಇನ್ನೂ ಅತಿಥಿ ಉಪನ್ಯಾಸಕರನ್ನು ಕರ್ತವ್ಯಕ್ಕೆ ಸೇರ್ಪಡೆಗೊಳಿಸಿಕೊಂಡಿಲ್ಲ’ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಸ್.ರಾಂಪುರೆ ಸಮಜಾಯಿಷಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.