ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷ ವಿಭಿನ್ನ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ದೇಶದ ಜನರ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ ಆರೋಗ್ಯ ಕರ್ನಾಟಕ ಕಾರ್ಡ್ (ಆಭಾ) ನೋಂದಣಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಆರೋಗ್ಯ ರಕ್ಷಣೆಗೆ ಆಭಾ ಕಾರ್ಡ್ ಯೋಜನೆ ಜಾರಿಗೆ ತಂದಿದ್ದು, ಈ ಕಾರ್ಡ್ ಇದ್ದರೆ ದೇಶದ ಯಾವುದೇ ಮೂಲೆಯಲ್ಲಿಯೂ ಚಿಕಿತ್ಸೆ ಪಡೆಯಬಹುದು. ಎಲ್ಲ ವಿವರ ಮಾಹಿತಿಯನ್ನು ಈ ಕಾರ್ಡ್ನಲ್ಲಿ ಸಂಪೂರ್ಣವಾಗಿ ನಮೂದು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್ ಇದ್ದವರಿಗೆ ₹ 5 ಲಕ್ಷ ಮತ್ತು ಎಪಿಎಲ್ ಕಾರ್ಡ್ ಇದ್ದವರಿಗೆ ₹ 1.50 ಲಕ್ಷ ಚಿಕಿತ್ಸಾ ವೆಚ್ಚ ನೀಡಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನರ ಆರೋಗ್ಯ ಸುಧಾರಣೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ನಿತ್ಯ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅಗತ್ಯ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಗುರುರಾಜ ಹಿರೇಗೌಡರ ಮಾತನಾಡಿ, ಈ–ಹೆಲ್ತ್ ಕಾರ್ಡ್ನಲ್ಲಿ ಫಲಾನುಭವಿಯ ಸಂಪೂರ್ಣ ಆರೋಗ್ಯ ಮಾಹಿತಿ ಇರಲಿದೆ. ಈ ಮೂಲಕ ಹೆಲ್ತ್ ಹಿಸ್ಟರಿ ವೈದ್ಯರಿಗೆ ಸಹಕಾರಿಯಾಗಲಿದೆ. ಇದನ್ನು ಎಲ್ಲರೂ ಮಾಡಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಮಾಡುವ ಉದ್ದೇಶದಿಂದ ಎಲ್ಲ ಮಾಹಿತಿಯನ್ನು ಆಲ್ಲೈನ್ ಮಾಡಲಾಗುತ್ತಿದೆ. ಈಗ ಖಾಸಗಿಯವರು ಇದೇ ಮಾದರಿಯಲ್ಲಿ ಸಾಗಿದ್ದಾರೆ. ಹೀಗಾಗಿ ಜಿಲ್ಲೆಯ ಜನರು ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಪ್ಪ ಸಂಕೀನ ಮಾತನಾಡಿ, ಪತ್ರಿಕೋದ್ಯಮ ವೃತ್ತಿಯಲ್ಲಿ ಸಾಕಷ್ಟು ಒತ್ತಡದಿಂದ ಕೆಲಸ ಮಾಡಬೇಕಾಗುತ್ತದೆ. ದಿನದ 24 ತಾಸುಗಳ ಕಾಲ ಎಚ್ಚರಿಕೆಯಿಂದ ಇರಬೇಕಿದೆ. ಆರೋಗ್ಯದ ಕಡೆಗೆ ಒತ್ತು ನೀಡುವ ಜತೆಗೆ ಸರ್ಕಾರಿ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಹಿರಿಯ ಪತ್ರಕರ್ತ ಅನಿಲ್ ದೇಶಪಾಂಡೆ ಅವರು ಇತ್ತೀಚೆಗೆ ನಿಧನರಾದ ಕಾರಣ ಒಂದು ನಿಮಿಷ ಕಾಲ ಮೌನಾಚರಣೆ ಮಾಡಲಾಯಿತು.
ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಆರ್ಸಿಎಚ್ಒ ಡಾ. ಮಲ್ಲಪ್ಪ ನಾಯ್ಕಲ್, ನೋಡಲ್ ಅಧಿಕಾರಿ ರಾಘವೇಂದ್ರ, ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ ವಿ.ಸಿ., ಸಂಘದ ಉಪಾಧ್ಯಕ್ಷ ರಾಜಕುಮಾರ ನಳ್ಳಿಕರ, ಕಾರ್ಯದರ್ಶಿ ಸಾಜೀದ್ ಹಯ್ಯಾತ, ಪತ್ರಕರ್ತರಾದ ಆನಂದ ಸೌದಿ, ರವಿಕುಮಾರ ನರಬೋಳಿ, ಬಿ.ಜಿ. ಪ್ರವೀಣಕುಮಾರ, ಮಲ್ಲಿಕಾರ್ಜುನರೆಡ್ಡಿ ಹತ್ತಿಕುಣಿ, ಅಮೀನ್ ಹೊಸೂರು, ಪರಶುರಾಮ ಐಕೂರ, ನಾಗರಾಜ ಕೋಟೆ, ಅಮರೇಶ ಬೊಮ್ಮರೆಡ್ಡಿ, ರೂಪೇಶ, ಶರಭು ನಾಟೇಕರ, ತೋಟೇಂದ್ರ ಮಾಕಲ, ವಿಶ್ವಕುಮಾರ, ದೇವರಾಜ ವರ್ಕನಳ್ಳಿ, ರವಿರಾಜ ಕಂದಳ್ಳಿ, ಮಲ್ಲು ಕಾಮರೆಡ್ಡಿ ಇದ್ದರು.
ಪತ್ರಕರ್ತ ನಾಗಪ್ಪ ಮಾಲಿಪಾಟೀಲ ನಿರೂಪಿಸಿದರು. ಪತ್ರಕರ್ತ ಸಿದ್ದಪ್ಪ ಲಿಂಗೇರಿ ವಂದಿಸಿದರು. ಕಚೇರಿ ಸಿಬ್ಬಂದಿ ಶ್ರೀಶೈಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.