
ಯಾದಗಿರಿ: ಕೊಲೆ ಆರೋಪ ಸಾಬೀತು ಆಗಿದ್ದರಿಂದ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ.
ವಡಗೇರಾ ತಾಲ್ಲೂಕಿನ ಕಾಡಂಗೇರಾ ಗ್ರಾಮದ ಸಾಬಣ್ಣ ಮಲ್ಲಯ್ಯ ಶಿಕ್ಷೆಗೆ ಒಳಗಾದ ಅಪರಾಧಿ.
ಅನೈತಿಕ ಸಂಬಂಧದ ಶಂಕೆಯಡಿ ಸಾಬಣ್ಣ, 2020ರ ಫೆಬ್ರುವರಿ 17ರಂದು ನಾಗರಾಜ ಸಿದ್ದಯ್ಯ ಅವರನ್ನು ಕೊಲೆ ಮಾಡಿದ್ದರು. ಮನೆಯ ಮುಂದೆ ಮಲಗಿದ್ದ ನಾಗರಾಜ ಅವರನ್ನು ಕೊಡಲಿಯಿಂದ ತಲೆ, ಕಪಾಳಕೆ ಹೊಡೆದು ಕೊಲೆಗೈದಿದ್ದ. ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಶರಣುಗೌಡ ನ್ಯಾಮ್ಣ್ಣನವರ್ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಾದ–ಪ್ರತಿವಾದ ಆಲಿಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಈರಣ್ಣ ಅವರು ಸಾಬಣ್ಣಗೆ ಸೆಕ್ಷನ್ 302 ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ₹ 10,000 ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.