ADVERTISEMENT

ಕೋವಿಡ್‌ ಪರೀಕ್ಷೆಗೆ ಹೆದರಿ ಕಾಂಪೌಂಡ್‌ ಹಾರಿದ ಜನ

ರೈಲ್ವೆ ನಿಲ್ದಾಣದಲ್ಲಿಲ್ಲ ಕಟ್ಟುನಿಟ್ಟಿನ ಕ್ರಮ, ಬೇರೆ ಜಿಲ್ಲೆ, ಅಂತರ ರಾಜ್ಯದಿಂದ ಬಂದವರು ಪರಾರಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 5:22 IST
Last Updated 23 ಏಪ್ರಿಲ್ 2021, 5:22 IST
ಯಾದಗಿರಿಯ ರೈಲ್ವೆ ನಿಲ್ದಾಣದ ಬಳಿ ಕೋವಿಡ್‌ ಪರೀಕ್ಷೆ ತಪ್ಪಿಸಿಕೊಳ್ಳಲು ಕಾಂಪೌಂಡ್‌ ಹಾರಿದ ಯುವಕ
ಯಾದಗಿರಿಯ ರೈಲ್ವೆ ನಿಲ್ದಾಣದ ಬಳಿ ಕೋವಿಡ್‌ ಪರೀಕ್ಷೆ ತಪ್ಪಿಸಿಕೊಳ್ಳಲು ಕಾಂಪೌಂಡ್‌ ಹಾರಿದ ಯುವಕ   

ಯಾದಗಿರಿ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ರೈಲ್ವೆ ನಿಲ್ದಾಣದಲ್ಲಿ ಮಾತ್ರ ಕೋವಿಡ್‌ ಪರೀಕ್ಷೆಗೆ ಹೆದರಿ ಅನೇಕರು ಕಾಂಪೌಂಡ್‌ ಹಾರಿ ತಪ್ಪಿಸಿಕೊಳ್ಳುತ್ತಿದ್ದಾರೆ.

ಹೆಚ್ಚು ಕೊರೊನಾ ಪ್ರಕರಣಗಳಿರುವ ಜಿಲ್ಲೆ ಅಥವಾ ರಾಜ್ಯದಿಂದ ಬಂದವರಿಗೆ ತಪಾಸಣೆ ಮಾಡಿ ಗಂಟಲು ದ್ರವ ತೆಗೆದುಕೊಳ್ಳಲಾಗುತ್ತಿದೆ. ಆದರೆ, ಕೆಲವರು ಪರೀಕ್ಷೆ ಮಾಡಿಸಿಕೊಳ್ಳದೇ ಇದರಿಂದ ನುಣುಚಿಕೊಳ್ಳುತ್ತಿದ್ದಾರೆ.

ಮಹಿಳೆಯರು ಮಾತ್ರ ಕೋವಿಡ್‌ ತಪಾಸಣೆಗಾಗಿ ಗಂಟಲು ದ್ರವ ಮಾದರಿ ನೀಡುತ್ತಿದ್ದಾರೆ. ಆದರೆ, ಯುವಕರು ಆವರಣ ಗೋಡೆ ಹಾರಿ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಿಲ್ಲ. ಇದಕ್ಕೆ ನಿಗಾ ವಹಿಸಬೇಕಾದವರು ಯಾರೂ ಇಲ್ಲದಂತಾಗಿದೆ.

ADVERTISEMENT

ಗುರುವಾರ ಬೆಳಿಗ್ಗೆ ಉದ್ಯಾನ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಗಳೂರಿನಿಂದ ಬಂದ ಅನೇಕರು ಕಾಂಪೌಂಡ್‌ ಜಿಗಿದು ತೆರಳುತ್ತಿರುವ ದೃಶ್ಯ ಕಂಡು ಬಂತು. ಮಹಾರಾಷ್ಟ್ರದಿಂದ ಬರುವ ರೈಲುಗಳ ಪ್ರಯಾಣಿಕರು ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿದೆ.

ಮಾಸ್ಕ್‌, ಪಿಪಿಇ ಕಿಟ್‌ ಧರಿಸದೇ ನಿರ್ಲಕ್ಷ್ಯ:

ಜಿಲ್ಲಾಸ್ಪತ್ರೆಯಲ್ಲಿ ವೈದ್ಯರೊಬ್ಬರು ಮಾಸ್ಕ್‌, ಪಿಪಿಇ ಕಿಟ್‌ ಧರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಬುಧವಾರ ರಾತ್ರಿ ವ್ಯಕ್ತಿಯೊಬ್ಬರು ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಆದರೆ, ವೈದ್ಯರು ಬನಿಯನ್‌ ಮೇಲೆ ನಿಂತು ರೋಗಿಯನ್ನು ದಾಖಲಿಸಿಕೊಳ್ಳುತ್ತಾರೆ. ಪ್ರಾಥಮಿಕ ಹಂತದಲ್ಲಿ ಏನು ಮಾಡಬೇಕೋ ಅದನ್ನು ಪ್ರಾರಂಭ ಮಾಡುತ್ತೇವೆ. ಬೆಳಿಗ್ಗೆ ಚಿಕಿತ್ಸೆ ನೀಡುತ್ತೇವೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ರೋಗಿ ಸಂಬಂಧಿಕರು ಮತ್ತು ವೈದ್ಯರ ನಡುವೆ ಮಾತುಕತೆಯಾಗಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.