ವಡಗೇರಾ: ಶುಕ್ರವಾರ ರಾತ್ರಿ ಸುರಿದ ಮಳೆಗೆ ತಾಲ್ಲೂಕಿನ ಗುಲಸರಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಬಲಾದ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ.
ಭಾರಿ ಮಳೆಯಿಂದ ಗ್ರಾಮದ ಪರಿಶಿಷ್ಟ ಸಮುದಾಯದವರ ಬಡಾವಣೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಹೆಚ್ಚಿನ ನೀರು ಹರಿದಾಡಿತು. ಸರ್ಕಾರಿ ಶಾಲೆಯ ಕೋಣೆಗಳಲ್ಲಿ ಮಳೆ ನೀರು ನುಗ್ಗಿದ್ದರಿಂದ ಶನಿವಾರ ಮಕ್ಕಳ ಕಲಿಕೆಗೆ ತೊಂದರೆ ಉಂಟಾಯಿತು.
ಬಬಲಾದ ಗ್ರಾಮದ 15ಕ್ಕೂ ಹೆಚ್ಚು ಮನೆಯೊಳಗೆ ಮಳೆ ನೀರು ನುಗ್ಗಿದ್ದರಿಂದ ಮಹಿಳೆಯರು ನೀರು ಹೊರಹಾಕಲು ಹರಸಾಹಸ ಮಾಡಿದರು.
ಗ್ರಾಮದ ಜಲಾಲಬೀ ಹಾಗೂ ಎಸ್ಸಿ ಬಡಾವಣೆಯ ಮಲ್ಲಪ್ಪ ಕ್ರಾಂತಿ ಅವರ ಮನೆಯಲ್ಲಿನ ಧವಸಧಾನ್ಯ ಹಾಗೂ ಅಗತ್ಯ ವಸ್ತುಗಳು ಹಾನಿಯಾಗಿವೆ.
ತಾಪಂ ಇಒ ಭೇಟಿ: ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಸಂಗ್ವಾರ ಬಬಲಾದ ಗ್ರಾಮಕ್ಕೆ ಭೇಟಿ ನೀಡಿ ತೊಂದರೆಗೊಳಗಾದ ಕುಟುಂಬಗಳ ಸಮಸ್ಯೆಯನ್ನು ಆಲಿಸಿದರು. ನಂತರ ಸ್ಥಳದಲ್ಲಿದ್ದ ಪಿಡಿಒ ಅವರನ್ನು ಕರೆದು ಜೆಸಿಬಿಯಿಂದ ನೀರು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ಚರಂಡಿಗಳ ಸ್ವಚ್ಛತೆಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಕೃಷಿ ಹಾಗೂ ಕಂದಾಯ ಇಲಾಖೆಯವರು ಜಂಟಿಯಾಗಿ ಪಂಚನಾಮೆ ಮಾಡಿ ಮಳೆಯಿಂದ ಹಾನಿಯಾದ ಬಗ್ಗೆ ವರದಿಯನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು
ಮಹಾಂತೇಶ, ಗ್ರಾಮ ಆಡಳಿತಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.