ADVERTISEMENT

ಯಾದಗಿರಿ: ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 15:04 IST
Last Updated 1 ನವೆಂಬರ್ 2019, 15:04 IST
ಯಾದಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು
ಯಾದಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಯಾದಗಿರಿ: ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 6 ಜನ ಗಣ್ಯರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹುಣಸಗಿಯ ಈಶ್ವರಪ್ಪ ಬಿ.ಬಡಿಗೇರ (ಸಂಗೀತ ಕ್ಷೇತ್ರ), ಸುರಪುರ ತಾಲ್ಲೂಕಿನ ಏವೂರಿನ ಶರಣಬಸವ ಭಜಂತ್ರಿ (ಹಿಂದೂಸ್ತಾನಿ ಗಾಯನ), ಸುರಪುರ ತಾಲ್ಲೂಕಿನ ದೇವಾಪುರದ ಬಸಮ್ಮ ಜಟ್ಟೆಪ್ಪ (ಕ್ರೀಡಾ ಕ್ಷೇತ್ರ), ಸುರಪುರದ ಪ್ರಕಾಶಚಂದ ಬಿ.ಜೈನ್ (ಸಾಹಿತ್ಯ ಕ್ಷೇತ್ರ), ಭಾರತೀಯ ಜೈನ ಸಂಘಟನೆಯ ರಾಜೇಶ್ ಜೈನ್ ದೋಖಾ (ಸಾಮಾಜಿಕ ಕ್ಷೇತ್ರ), ಸುರಪುರ ತಾಲ್ಲೂಕಿನ ರುಕ್ಮಾಪುರದ ಕಾರ್ತಿಕ ಕೀರಪ್ಪ ಬಡಗಾ ಕಾರ್ತಿಕ ಅವರ ಮಗನ ದೇಹದಾನ (ಸಮಾಜ ಸೇವೆ) ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ಗಣೇಶ ಉತ್ಸವ ಭಾವೈಕ್ಯತಾ ಸಮಿತಿ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ಅತ್ಯುತ್ತಮ ಗಣೇಶ ಪ್ರತಿಷ್ಠಾಪನಾ ಸಮಿತಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ADVERTISEMENT

ಗಮನ ಸೆಳೆದ ಸ್ತಬ್ಧಚಿತ್ರಗಳ ಮೆರವಣಿಗೆ: ಕಾರ್ಯಕ್ರಮಕ್ಕೂ ಮೊದಲು ನಗರದ ಮೈಲಾಪುರ ಅಗಸಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನವರೆಗೆ ಸ್ತಬ್ಧಚಿತ್ರಗಳ ಮತ್ತು ನಾಡದೇವತೆಯ ಭಾವಚಿತ್ರದ ಮೆರವಣಿಗೆ ಗಮನ ಸೆಳೆಯಿತು.

ಎನ್ಈಕೆಆರ್‌ಟಿಸಿ ವತಿಯಿಂದ ಸ್ವಚ್ಛ ಪರಿಸರ ಸಂರಕ್ಷಣೆ ಕುರಿತು (ಪ್ರಥಮ), ಯಾದಗಿರಿಯ ಸಾರ್ವಜನಿಕ ಪಾಠ ಶಾಲೆಯಿಂದ ಕಿತ್ತೂರು ರಾಣಿ ಚನ್ನಮ್ಮ ವೇಷ (ದ್ವಿತೀಯ), ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಿಂದ ಬೇಟಿ ಬಚಾವ್ ಬೇಟಿ ಪಡಾವ (ತೃತೀಯ), ಮೂಕಾಂಬಿಕಾ ಶಿಕ್ಷಣ ಸಂಸ್ಥೆಯಿಂದ ರಾಣಿ ಅಬ್ಬಕ್ಕ ದೇವಿ, ಅಲ್‍ಹಕ್ ಪ್ರಾಥಮಿಕ ಶಾಲೆಯಿಂದ ಕರ್ನಾಟಕದ ವಾಲ್ಮೀಕಿ ನಾಯಕರ ಚರಿತ್ರೆ, ಅರಣ್ಯ ಇಲಾಖೆಯಿಂದ ಗಿಡ-ಮರ ಮತ್ತು ವನ್ಯಜೀವಿಗಳ ಸ್ತಬ್ಧಚಿತ್ರ, ನಗರಸಭೆಯಿಂದ ಕಸ ವಿಲೇವಾರಿ ಕುರಿತು ಜಾಗೃತಿ ಮೂಡಿಸುವ ಸ್ತಬ್ಧಚಿತ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಕುರಿತ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಸಾಂಸ್ಕೃತಿಕ ಕಾರ್ಯಕ್ರಮ: ಚಿತ್ರದುರ್ಗ ಜಿಲ್ಲೆಯ ದೊಡ್ಡಬೀರನಹಳ್ಳಿ ನಾಗೇಶ ಮತ್ತು ತಂಡದವರಿಂದ ವೀರಗಾಸೆ, ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಖಂಡೇನಹಳ್ಳಿಯ ಶಿವಕುಮಾರ ಮತ್ತು ತಂಡದವರಿಂದ ಪಟ ಕುಣಿತ ಹಾಗೂ ಚಳ್ಳಕೆರೆ ತಾಲ್ಲೂಕಿನ ತಿಪ್ಪೇಸ್ವಾಮಿ ಮತ್ತು ತಂಡದವರಿಂದ ಬೊಂಬೆ ಕುಣಿತ ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.