ADVERTISEMENT

ಮಾದಿಗ ಯುವ ಸೇನೆಯಿಂದ ರ‍್ಯಾಲಿ

ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 16:03 IST
Last Updated 14 ಸೆಪ್ಟೆಂಬರ್ 2020, 16:03 IST
ಯಾದಗಿರಿಯಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ಯುವ ಸೇನೆ ವತಿಯಿಂದ ಸೋಮವಾರ ಪ್ರತಿಭಟನಾ ರ‍್ಯಾಲಿ ನಡೆಯಿತು
ಯಾದಗಿರಿಯಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ಯುವ ಸೇನೆ ವತಿಯಿಂದ ಸೋಮವಾರ ಪ್ರತಿಭಟನಾ ರ‍್ಯಾಲಿ ನಡೆಯಿತು   

ಯಾದಗಿರಿ: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಮಾದಿಗ ಯುವ ಸೇನೆ ವತಿಯಿಂದ ಸೋಮವಾರ ಇಲ್ಲಿನ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಿತು.

ನಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಸೇನೆಯ ಕಾರ್ಯಕರ್ತರು, ಹಲವಾರು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದರೂ ಆಳುವ ಸರ್ಕಾರಗಳು ಬೇಡಿಕೆ ಈಡೇರಿಸುತ್ತಿಲ್ಲ ಎಂದು ಆರೋಪಿಸಿದರು.ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟ್‌ ನೀಡಿರುವ ಆದೇಶ ಪಾಲಿಸುವಂತೆ ಆಗ್ರಹಿಸಿದರು.

ಮಾದಿಗ ಯುವ ಸೇನೆಯ ಸಂಸ್ಥಾಪಕ ರಾಜ್ಯ ಘಟಕದ ಅಧ್ಯಕ್ಷ ನಂದಕುಮಾರ ಬಾಂಬೆಕಾರ್ ಮಾತನಾಡಿ,ಪರಿಶಿಷ್ಟ ಜಾತಿಗಳ ಜನಸಂಖ್ಯಾವಾರು ಮೀಸಲಾತಿ ಹಂಚಿಕೆ ಮಾಡಿ ನ್ಯಾ.ಎ.ಜೆ ಸದಾಶಿವ ಆಯೋಗದ ಶಿಫಾರಸುಗಳನ್ನು ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಮುಂಬರುವ ಅಧಿವೇಶನದಲ್ಲಿ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿದರು.

ADVERTISEMENT

ರಾಜ್ಯದಲ್ಲಿ ಮಾದಿಗರು ಪರಿಶಿಷ್ಟ ಜಾತಿಗಳಲ್ಲಿ ಅತಿ ಹೆಚ್ಚು ಜನಸಂಖ್ಯೆಯಲ್ಲಿದ್ದಾರೆ. ಆದರೆ, ಎಲ್ಲ ಸರ್ಕಾರಗಳಿಂದ ಮಾದಿಗ ಸಮುದಾಯಕ್ಕೆ ಅನ್ಯಾಯವಾ ಗುತ್ತಲೇಬಂದಿದೆ ಎಂದು ಆಪಾದಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ಒಳಮಿಸಲಾತಿ ಜಾರಿಗೆ 25 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ. ನ್ಯಾ.ಎ.ಜೆ.ಸದಾಶಿವ ಆಯೋಗ ರಚನೆ ಮಾಡುವಾಗ ವಿರೋಧ ಮಾಡದ ಸ್ಪರ್ಶ ಸಮುದಾಯದವರು ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಈಗ ಲಂಬಾಣಿ, ಬೋವಿ ಸಮುದಾಯದ ಶಾಸಕರು ವಿರೋಧಿಸುತ್ತಿರುವುದು ಸಂವಿಧಾನವನ್ನು ವಿರೋಧಿಸಿದಂತೆ ಎಂದು ಆರೋಪಿಸಿದರು.

ಮಾದಿಗ ಯುವ ಸೇನೆಯ ಜಿಲ್ಲಾ ಘಟಕ ಅಧ್ಯಕ್ಷ ಬಸವರಾಜ ಹಗರಟಗಿ ಮಾತನಾಡಿ, ಲಂಬಾಣಿ, ಬೋವಿ ಇತರ ಜಾತಿಗಳನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸಬೇಕೆಂದು ಹಾವನೂರ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದಾಗ ಮಾದಿಗ ಮತ್ತು ಛಲವಾದಿ ಸಮುದಾಯದ ಮುಖಂಡರು ವಿರೋಧ ವ್ಯಕ್ತಪಡಿಸಿಲ್ಲ. ಸರ್ಕಾರದ ಯೋಜನೆಗಳ ಲಾಭವನ್ನು ಬಹುಪಾಲು ಸ್ಪರ್ಶ ಸಮುದಾಯದ ದಲಿತರು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಮೂಲ ದಲಿತರಿಗೆ ಅನ್ಯಾಯವಾಗುತ್ತಿದ್ದು, ಕೂಡಲೇ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ವಾಸುದೇವ ಕಟ್ಟಿಮನಿ, ಭೀಮಾಶಂಕರ ಬಿಲ್ಲಾಲ್‌, ದಾನಪ್ಪ ಲಕ್ಷ್ಮಿಪುರ, ಹಣಮಂತ ಬೊಮ್ಮನಹಳ್ಳಿ, ಭೀಮರಾಯ ಬಂದಳ್ಳಿ, ಬಸವರಾಜ ಕೋಡೆಕಲ್, ಪರಶುರಾಮ ಪರಸನಳ್ಳಿ, ಚಂದ್ರಶೇಖರ ದಾಸನಕೇರಿ, ಮಲ್ಲು ರಾಮಸಮುದ್ರ, ಶಿವು ಮುದ್ನಾಳ, ಗೋಪಾಲ ಬಿಜಾಸಪುರ, ಬಸವರಾಜ ಹುಣಸಗಿ, ಕಾಶಪ್ಪ ಹೆಗ್ಗಣಗೇರಾ ಸೇರಿದಂತೆ ಶಹಾಪುರ, ಸುರಪುರ, ಹುಣಸಗಿ, ಗುರುಮಠಕಲ್‌ ತಾಲ್ಲೂಕು ಅಧ್ಯಕ್ಷರು, ನೂರಾರು
ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.