ಯರಗೋಳ: ಕೆಲವು ದಿನಗಳಿಂದ ಧಾರಾಕಾರವಾಗಿ ಸುರಿದ ಜೋರಾದ ಮಳೆಗೆ, ವಾರ್ಡ್ ಸಂಖ್ಯೆ 5ರ ವ್ಯಾಪ್ತಿಯ ಲಿಂಗಸನಳ್ಳಿ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದು, ತಾಂಡಾ ನಿವಾಸಿಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.
ಯರಗೋಳ ಗ್ರಾಮದಿಂದ 3 ಕಿ.ಮೀ ದೂರವಿರುವ ಲಿಂಗಸನಳ್ಳಿ ತಾಂಡದಲ್ಲಿ 75 ಮನೆ 350 ಜನರು ವಾಸಮಾಡುವ ಚಿಕ್ಕ ತಾಂಡಾವಾಗಿದೆ. ರಸ್ತೆ ಕೊಚ್ಚಿಕೊಂಡು ಹೋದ ಪರಿಣಾಮ ದಿನನಿತ್ಯದ ವ್ಯವಹಾರಕ್ಕೆ ಯರಗೋಳ ಗ್ರಾಮಕ್ಕೆ ತೆರಳುವ ತಾಂಡಾ ನಿವಾಸಿಗಳು, 5 ದಿನಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ.
‘ತಾಂಡಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರೆ ಇರುವುದರಿಂದ, ಕೃಷಿ ಉತ್ಪನ್ನಗಳು ವಾಹನಗಳ ಮೂಲಕ ದೂರದ ಊರುಗಳಿಗೆ ಸಾಗಾಣೆ ಮಾಡಲು ತೊಂದರೆಯಾಗಿದೆ. ಜಾನುವಾರುಗಳು ಆನಾರೋಗ್ಯದ ಸಮಸ್ಯೆಯಿಂದ ನರಳಾಡುತ್ತಿದ್ದು, ಆಸ್ಪತ್ರೆಗೆ ಕರೆದೊಯ್ಯುದು, ಸೂಕ್ತ ಚಿಕಿತ್ಸೆ ಕೊಡಲಾಗುತ್ತಿಲ್ಲ’ ಎಂದು ತಾಂಡಾ ನಿವಾಸಿಗಳು ನೋವಿನಿಂದ ನುಡಿದರು.
ತಾಂಡಾದ ಯುವಕ ವಿನೋದ ಮಾತನಾಡಿ, ‘ಮಳೆಯಿಂದಾಗಿ ಮಣ್ಣಿನ ರಸ್ತೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಗರ್ಭಿಣಿಯರಿಗೆ, ವೃದ್ಧರಿಗೆ ಅನಾರೋಗ್ಯದ ಸಮಸ್ಯೆ ಹೆಚ್ಚುತ್ತಿದೆ, ರಾತ್ರಿ ಹೊತ್ತು ಮನೆಬಿಟ್ಟು ಹೊರಗಡೆ ಹೋಗುತ್ತಿಲ್ಲ’ ಎಂದರು.
ಸ್ಥಳಕ್ಕೆ ಬೇಟಿ ನೀಡಿ ವೀಕ್ಷಣೆ ಮಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮು ಪವಾರ, ಸಂಭಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.