ಸುರಪುರ: ‘1921ರಲ್ಲಿ ಆರಂಭವಾದ ರುಕ್ಮಾಪುರದ ಸರ್ಕಾರಿ ಶಾಲೆ ನಾಡಿಗೆ ಉತ್ತಮ ನಾಗರಿಕರನ್ನು ನೀಡಿದೆ. ಅನೇಕ ಜನರು ಉನ್ನತ ಹುದ್ದೆಗಳಲ್ಲಿರುವುದು ಶ್ಲಾಘನೀಯ’ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.
ತಾಲ್ಲೂಕಿನ ರುಕ್ಮಾಪುರ ಗ್ರಾಮದಲ್ಲಿ ನಮ್ಮೂರು ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾವು ಕಲಿತ ಶಾಲೆಯ ದಿನಗಳ ನೆನಪುಗಳು ಅವಿಸ್ಮರಣೀಯವಾಗಿರುತ್ತವೆ. ಶಾಲೆ-ಕಾಲೇಜುಗಳು ಮುಂದೆ ಓಡಾದರೆ ಬಾಲ್ಯದ ಅಂದಿನ ದಿನಗಳು ನೆನಪಾ ಗುತ್ತವೆ. ಇಲ್ಲಿ ನಾನು ನಾ ಓದಿದೆ ಎಂಬ ನೆನಪು, ಆತ್ಮೀಯತೆ ಉಕ್ಕಿ ಬಂದು ಮನಸ್ಸಿಗೆ ಆನಂದ ತರುತ್ತದೆ’ ಎಂದರು.
‘ನಾನು ಶಿಕ್ಷಣ ಪ್ರೇಮಿ. ಶಾಸಕನಾಗಿದ್ಧಾಗ ಈ ಗ್ರಾಮಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ್ದೇನೆ. ಶಾಲೆ ದುರಸ್ತಿ ಮಾಡಿ, 9 ಕೋಣೆಗಳನ್ನು ಹಾಕಿಸಿರುತ್ತೇನೆ. ಗ್ರಾಮಸ್ಥರಿಗೆ ಸರ್ಕಾರಿ ಸೌಲಭ್ಯ, ಕುಡಿಯುವ ನೀರು, ಸಿಸಿ ರಸ್ತೆ, ಕಲ್ಯಾಣ ಮಂಟಪ, ಶಾದಿ ಮಹಲ್ ಒದಗಿಸಿ ಗ್ರಾಮದ ಅಭಿವೃದ್ಧಿಗೆ ಶಕ್ತಿ ಮೀರಿ ಸೇವೆ ಮಾಡಿರುತ್ತೇನೆ’ ಎಂದರು.
ಡಿಡಿಪಿಐ ಶಾಂತಗೌಡ ಪಾಟೀಲ ಮಾತನಾಡಿ, ‘ಯಾದಗಿರಿ ಜಿಲ್ಲೆಯಲ್ಲಿ ಈ ವರ್ಷ ರುಕ್ಮಾಪುರ ಶಾಲೆ, ಶಹಾಪುರ ತಾಲ್ಲೂಕಿನ ಬೆಂಡೆಬೆಂಬಳಿ ಶಾಲೆ, ಯಾದಗಿರಿ ತಾಲೂಕಿನ ಚಂಡ್ರಕಿ ಶಾಲೆ ಈ ಮೂರು ಶಾಲೆಗಳು ನೂರು ವರ್ಷಗಳನ್ನು ಪೂರೈಸಿವೆ. ಈ ಶಾಲೆಗಳಿಗೆ ಮೂಲಸೌಲಭ್ಯಗಳನ್ನು ಈಡೇರಿಸಿ ಕೊಳ್ಳಲು ಇಲಾಖೆ ವಿಶೇಷ ಅನುದಾನ ಬಿಡುಗಡೆ ಮಾಡಿದೆ’ ಎಂದರು.
ಗುರಶಾಂತ ಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಚಂದ್ರಕಾಂತ ಭಂಡಾರೆ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಮಹಾದೇವರೆಡ್ಡಿ, ಪ್ರಮುಖರಾದ ರಾಜಶೇಖರಗೌಡ ಪಾಟೀಲ, ವಜ್ಜಲ್, ರಾಜಾ ಪಿಡ್ಡನಾಯಕ, ರಾಜಾ ರೂಪಕುಮಾರ ನಾಯಕ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಮುಖ್ಯ ಶಿಕ್ಷಕ ಲಿಂಗಯ್ಯ ಕಲ್ಲೂರಮಠ ಇದ್ದರು.ನಂತರ ಇಂದುಮತಿ ಸಾಲಿಮಠ ಅವರಿಂದ ಹಾಸ್ಯ ಸಂಜೆ ನಡೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.