
ಯಾದಗಿರಿ: ನಗರದ ಟಿ.ಬಿ ಬಡಾವಣೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಬಡಾವಣೆಯ ನಿವಾಸಿಗಳು ರಸ್ತೆಯಲ್ಲಿ ಓಡಾಡಲು ಭಯಪಡುವಂತೆ ಆಗಿದೆ.
ರೈಲು ನಿಲ್ದಾಣದಿಂದ ಹಳೇ ಬಸ್ ನಿಲ್ದಾಣವರೆಗಿನ ರಸ್ತೆಯ ಎಲ್ಲೆಂದರಲ್ಲಿ ಬೀದಿ ನಾಯಿಗಳು ಹಿಂಡು ಜಮೆ ಆಗುತ್ತಿದೆ. ಇದರಿಂದಾಗಿ ಮಕ್ಕಳು, ಮಹಿಳೆಯರು, ವೃದ್ಧರು ಒಂಟಿಯಾಗಿ ಓಡಾಡುವುದು ಕಷ್ಟವಾಗಿದೆ. ರಸ್ತೆಗಳಲ್ಲಿ ಬೈಕ್ನಲ್ಲಿ ಹೋಗುವ ಸವಾರರನ್ನು ನಾಯಿಗಳು ಬೆನ್ನಟ್ಟುತ್ತವೆ.
ಕಳೆದ ವಾರ ಬಡಾವಣೆ ನಿವಾಸಿಯಾದ ರತ್ನಾಬಾಯಿ ಅವರಿಗೆ ಬೀದಿ ನಾಯಿಯೊಂದು ಕಚ್ಚಿತು. ನಾಲ್ಕೈದು ಹಲ್ಲುಗಳು ನಾಟಿದ್ದು, ತೀವ್ರ ಗಾಯವಾಯಿತು. ಇದರಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಹೊರಗಡೆ ಬಿಡಲು ಹೆದರುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.
ರೈಲು ನಿಲ್ದಾಣ– ಹಳೆ ಬಸ್ ನಿಲ್ದಾಣ ನಡುವಿನ ರಸ್ತೆಯಲ್ಲಿ ನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಅವರಲ್ಲಿ ಹೆಚ್ಚಿನವರು ಪ್ರಯಾಣಿಕರೇ ಇರುತ್ತಾರೆ. ಬೀದಿ ನಾಯಿಗಳಿಂದಾಗಿ ಹೆದರಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಮಹಿಳೆಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಬೀದಿ ನಾಯಿಗಳ ಹಾವಳಿಗೆ ನಗರಸಭೆಯ ಅಧಿಕಾರಿಗಳು ತಕ್ಷಣವೇ ಕಡಿವಾಣ ಹಾಕಬೇಕು. ಇಲ್ಲದೆ ಇದ್ದರೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುವುದು ಎನ್ನುತ್ತಾರೆ ಬಡಾವಣೆಯ ಸುನಿಲ್, ಅನಿಲ್, ದಶರಥ, ಅನುಸುಯಾ, ಕಸ್ತೂರಬಾಯಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.