ADVERTISEMENT

ಉರಿಯದ ಬೀದಿ ದೀಪ: ಕತ್ತಲಲ್ಲಿ ಪಟ್ಟಣ

ಚರಂಡಿ ಕಾಮಗಾರಿ ಅಪೂರ್ಣ: ಕಿತ್ತು ಹೋದ ರಸ್ತೆಗಳು, ಮನೆ ಮುಂದೆ ಕೊಳಚೆ ನೀರು

ದೇವಿಂದ್ರಪ್ಪ ಬಿ.ಕ್ಯಾತನಾಳ
Published 21 ಏಪ್ರಿಲ್ 2021, 5:38 IST
Last Updated 21 ಏಪ್ರಿಲ್ 2021, 5:38 IST
ವಡಗೇರಾ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಿದ್ಯುತ್ ದೀಪಗಳು ಹಾಳಾಗಿವೆ
ವಡಗೇರಾ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಿದ್ಯುತ್ ದೀಪಗಳು ಹಾಳಾಗಿವೆ   

ವಡಗೇರಾ: ಹೊಸ ತಾಲ್ಲೂಕು ಕೇಂದ್ರವಾದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬೀದಿ ದೀಪ ಉರಿಯುತ್ತಿಲ್ಲ. ಸಂಜೆಯಾಗುತ್ತಿದ್ದಂತೆ ಕತ್ತಲೆ ಆವರಿಸುತ್ತದೆ.

ಎರಡು ತಿಂಗಳುಗಳು ಕಳೆದರೂ ಗ್ರಾಮ ಪಂಚಾಯಿತಿ ಅವುಗಳ ದುರಸ್ತಿ ಗೋಜಿಗೆ ಹೋಗಿಲ್ಲ.

ಪಟ್ಟಣದಲ್ಲಿ ಸುಮಾರು ನಾಲ್ಕು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಸುಮಾರು ₹1 ಕೋಟಿ ವೆಚ್ಚದಲ್ಲಿ ಸಿ.ಸಿ ರಸ್ತೆ, ಚರಂಡಿ ನಿರ್ಮಿಸಿತ್ತು. ಬೀದಿ ದೀಪಗಳನ್ನು ಸಹ ಅಳವಡಿಸಿತ್ತು. ನಿರ್ವಹಣೆ ಕೊರತೆಯ ಕಾರಣ ರಸ್ತೆ, ಬೀದಿ ದೀಪ, ಚರಂಡಿ ಹಾಳಾಗಿವೆ. ಸಾರ್ವಜನಿಕರಿಗೆ
ತೊಂದರೆಯಾಗಿದೆ.

ADVERTISEMENT

ರಸ್ತೆ ಮೇಲೆ ಬೈಕ್‌, ಎತ್ತಿನ ಗಾಡಿಗಳು, ಟ್ರ್ಯಾಕ್ಟರ್‌ ಮತ್ತು ಭಾರಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ರಸ್ತೆ ಮೇಲೆ ಮಣ್ಣು ಬಿದ್ದಿದೆ. ಬೈಕ್‌ ಸವಾರರು ಬಿದ್ದು ಗಾಯ ಮಾಡಿಕೊಂಡ ಉದಾಹರಣೆಯೂ ಇದೆ.

‘ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ಕಾಮಗಾರಿ ಅಪೂರ್ಣವಾಗಿದೆ. ಇದರಿಂದ ನಿವಾಸಿಗಳ ಮನೆ ಮುಂದೆ ಮಲಿನ ನೀರು ಹರಿದು ಸಮಸ್ಯೆ ಉಂಟಾಗುತ್ತಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಸ್ಪಂದಿಸುತ್ತಿಲ್ಲ. ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಗಳಿಗೆ ಪರಿಹಾರ ನೀಡಬೇಕು’ ಎಂದು ಕರವೇ ಕಾರ್ಯಕರ್ತ ಪೀರುಸಾಬ ಮರಡಿ ಮನವಿ ಮಾಡುತ್ತಾರೆ.

‘ಬೀದಿ ದೀಪಗಳು ಕೆಟ್ಟಿರುವುದು ಗಮನಕ್ಕೆ ಬಂದಿದೆ. ಒಟ್ಟು 18 ಕಂಬಗಳಿವೆ. ಅವುಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ವ್ಯತ್ಯಾಸವಾಗಿ ಸಮಸ್ಯೆ ಉಂಟಾಗಿದೆ. ಕಂಬದ ಸಾಮಗ್ರಿಗಳನ್ನು ತರಿಸಲಾಗಿದೆ. ಅದನ್ನು ಇನ್ನು ಎರಡು ದಿನಗಳಲ್ಲಿ ದುರಸ್ತಿ ಮಾಡಲಾಗುತ್ತದೆ. ರಸ್ತೆ ಮೇಲಿನ ಸಾಮಗ್ರಿಗಳನ್ನು ತೆಗೆಯುವಂತೆ ಸೂಚಿಸಲಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಸಜ್ಜನ ಮಾಹಿತಿ
ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.