ADVERTISEMENT

ಸುರಪುರ: ‘ಗ್ಯಾರಂಟಿ’ ಅನುಷ್ಠಾನ ಸಭೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 15:51 IST
Last Updated 28 ಸೆಪ್ಟೆಂಬರ್ 2024, 15:51 IST
ಸುರಪುರದ ತಾಲ್ಲೂಕು ಪಂಚಾಯತಿಯಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನಾ ಸಭೆಯಲ್ಲಿ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು 
ಸುರಪುರದ ತಾಲ್ಲೂಕು ಪಂಚಾಯತಿಯಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನಾ ಸಭೆಯಲ್ಲಿ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು    

ಸುರಪುರ: ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಗ್ಯಾರಂಟಿ ಯೋಜನೆಯ ಪ್ರಥಮ ಸಭೆ ನಡೆಯಿತು. ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿವೆಯೇ ಎಂಬ ಕುರಿತು ಚರ್ಚೆ ನಡೆಯಿತು.

‘ಗೃಹಲಕ್ಷ್ಮೀ ಯೋಜನೆಯ ಅರ್ಹ ಮಹಿಳಾ ಫಲಾನುಭವಿಗಳಿಗೆ ಮಾಸಿಕ ₹2000 ಕಡ್ಡಾಯವಾಗಿ ಜಮಾ ಮಾಡಬೇಕು. ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಬಗ್ಗೆ ವ್ಯಾಪಕವಾಗಿ ಪ್ರಚಾರ ಮತ್ತು ಮಾಹಿತಿ ನೀಡಬೇಕು’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆಯ ಸದಸ್ಯರು ಸೂಚಿಸಿದರು.

‘ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಬಸ್ ನಿಲ್ದಾಣ ಹತ್ತಿರವಿದ್ದಾಗ ನಿಲ್ಲಿಸದೆ ಹೋಗುತ್ತಾರೆ ಎಂಬ ದೂರುಗಳಿವೆ. ಈ ತರಹದ ಬೇಜವಾಬ್ದಾರಿ ಮುಂದೆ ಆಗಬಾರದು’ ಎಂದು ಘಟಕ ವ್ಯವಸ್ಥಾಪಕರಿಗೆ ತಿಳಿಸಿದರು.

ADVERTISEMENT

‘ಅನ್ನ ಭಾಗ್ಯ ಯೋಜನೆಯಡಿ ಎಲ್ಲಾ ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಪ್ರತಿ ಒಬ್ಬರಿಗೂ ಹಣ ಪಾವತಿಸಬೇಕು. ನ್ಯಾಯಬೆಲೆ ಅಂಗಡಿಗಳು ಸಮಯಕ್ಕೆ ಸರಿಯಾಗಿ ಆರಂಭಿಸುವುದಿಲ್ಲ. ಒಂದು ದಿನ ಬಯೋಮೆಟ್ರಿಕ್ ಹಾಕಿಸಿ ಮತ್ತೊಂದು ದಿನ ರೇಷನ್ ತೆಗೆದುಕೊಂಡು ಹೋಗಲು ಸೂಚಿಸುತ್ತಿದ್ದಾರೆ. ಇದು ಸಮರ್ಪಕ ಕೆಲಸವಲ್ಲ. ಪ್ರತಿ ತಿಂಗಳು ದಿನಾಂಕ ಹಾಗೂ ವೇಳೆಯನ್ನು ನಿಗದಿಪಡಿಸಿ ವಿತರಿಸಬೇಕು’ ಎಂದು ಆಹಾರ ನಿರೀಕ್ಷಕರಿಗೆ ಸೂಚಿಸಿದರು.

ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ 1107 ಅರ್ಹ ನಿರುದ್ಯೋಗಿ ಫಲಾನುಭವಿ ಆಯ್ಕೆ ಮಾಡಿದ್ದು, ಇನ್ನೂ ಬಾಕಿ ಇರುವ ಅರ್ಹ ಫಲಾನುಭವಿಗಳನ್ನು ನೋಂದಾಯಿಸಬೇಕು ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಯ ಸಮಿತಿ ತಾಲ್ಲೂಕು ಮಟ್ಟದ ಸದಸ್ಯರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್, ಗ್ಯಾರಂಟಿ ಯೋಜನೆಯ ಸಮಿತಿ ಅಧ್ಯಕ್ಷ ಬೀರಲಿಂಗ ಬಾದ್ಯಾಪುರ, ಸದಸ್ಯರಾದ ವಿಜಯಕುಮಾರ್, ವಿಶ್ವ ದೀವಳಗುಡ್ಡ, ಪಾರಪ್ಪ ದೇವತ್ಕಲ್, ವೆಂಕಟೇಶ್, ಶೇಖಪ್ಪ ಬಡಿಗೇರ್, ಕಿರಣ್ ಕುಮಾರ್, ಖಾದರ್ ನಗನೂರು, ಪರಮಣ್ಣ ಕಕ್ಕೇರಾ, ಪರಶುರಾಮ ಚಿಂಚೋಳಿ, ಭೀಮಣ್ಣ ದೊಡ್ಡಮನಿ, ಘಟಕ ವ್ಯವಸ್ಥಾಪಕ ಭೀಮಸಿಂಗ್ ರಾಠೋಡ, ಸಿಡಿಪಿಒ ಅನಿಲಕುಮಾರ, ಆಹಾರ ಇಲಾಖೆಯ ಚಿದಾನಂದ, ಜೆಸ್ಕಾಂ ಅಧಿಕಾರಿಗಳು, ಜಿಲ್ಲಾ ಕೌಶಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.