ADVERTISEMENT

ಜಲಪಾತ ವೀಕ್ಷಣೆಗೆ ತೆರಳಿದ್ದ ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 3:13 IST
Last Updated 4 ಅಕ್ಟೋಬರ್ 2020, 3:13 IST
ಅಬ್ದುಲ್ ರಹೀಂ
ಅಬ್ದುಲ್ ರಹೀಂ   

ಗುರುಮಠಕಲ್: ತಾಲ್ಲೂಕಿನ ನಜರಾಪುರ ಗ್ರಾಮದ ಹೊರವಲಯದ ದಬ್ ದಬಿ ಜಲಪಾತ ವೀಕ್ಷಣೆಗೆ ಶನಿವಾರ ತೆರಳಿದ್ದ ಐವರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.

ಹೈದರಾಬಾದ್ ಮೂಲದ ಅಬ್ದುಲ್ ರಹೀಂ (22) ಹಾಗೂ ಅದ್ನಾನ್ (16) ಮೃತಪಟ್ಟಿದ್ದು, ಇಬ್ರಾಹಿಂ ಸ್ಥಿತಿ ಗಂಭೀರವಾಗಿದೆ.

ಪಟ್ಟಣದಲ್ಲಿನ ಸಂಬಂಧಿಕರ ಮದುವೆಗೆ ಬಂದಿದ್ದ ಹೈದರಾಬಾದ್ ಮೂಲದ ಅಬೀಬ್ ಅಲಿ, ಅಬೀಬ್ ಅಬ್ದುಲ್ ಖಾದರ್, ಅಬ್ದುಲ್ ರಹೀಮ್, ಅದ್ನಾನ್ ಮತ್ತು ಇಬ್ರಾಹಿಂ ಅವರು ಮದುವೆಯ ನಂತರ ಜಲಪಾತ ವೀಕ್ಷಣೆಗೆ ಹೋಗಿದ್ದರು.

ADVERTISEMENT

ಅದ್ನಾನ್ ಜಲಪಾತದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ರಕ್ಷಿಸಲು ತೆರಳಿದ ಅಬ್ದುಲ್ ರಹೀಂ ಹಾಗೂ ಇಬ್ರಾಹಿಂ ಪೈಕಿ ಅಬ್ದುಲ್ ರಹೀಂ ಕೂಡ ಮೃತಪಟ್ಟಿದ್ದಾರೆ. ಇಬ್ರಾಹಿಂ ಅವರನ್ನು ಸ್ಥಳದಲ್ಲಿದ್ದವರು ರಕ್ಷಿಸಿದ್ದು, ಚಿಕಿತ್ಸೆಗಾಗಿ ಹೈದರಾಬಾದ್ ನಗರಕ್ಕೆ ಕಳುಹಿಸಲಾಗಿದೆ.

ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ತಿಂಗಳು ರಾಜಸ್ಥಾನ ಮೂಲದ ಯುವಕ ಇದೇ ಜಲಪಾತದಲ್ಲಿ ಮೃತಪಟ್ಟ ಘಟನೆ ನಡೆದಿತ್ತು. ಜಲಪಾತದ ಬಳಿ ಪದೇ ಪದೇ ಇಂತಹ ಅಹಿತಕರ ಘಟನೆಗಳು ನಡೆಯುತ್ತಿವೆ. ಇವುಗಳನ್ನು ತಡೆಯಲು ‘ಈಗಲಾದರೂ ಜಲಪಾತದ ಹತ್ತಿರ ಸೂಚನಾ ಫಲಕ ಅಳವಡಿಸಿ, ತಡೆಗೋಡೆ ನಿರ್ಮಿಸಬೇಕು’ ಎಂದು ಗ್ರಾಮಸ್ಥರು
ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.