ಯಾದಗಿರಿ: ನಗರದ ವಿವಿಧೆಡೆ ಜೆಸ್ಕಾಂ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳಿಗೆ ಹಸಿರು ಬಳ್ಳಿ ಹಬ್ಬಿದ್ದು, ಆಪಾಯಕ್ಕೆ ಆಹ್ವಾನಿಸುವಂತೆ ಆಗಿದೆ ಎಂದು ಪ್ರಜಾವಾಣಿ ಸೆಪ್ಟೆಂಬರ್ 2ರಂದು ವರದಿ ಪ್ರಕಟಿಸಿತ್ತು.
ಈಗ ನಗರದ ವಿವಿಧೆಡೆ ಹಸಿರು ಬಳ್ಳಿ ತೆರವುಗೊಳಿಸುವ ಕಾರ್ಯಕ್ಕೆ ಜೆಸ್ಕಾಂ ಮುಂದಾಗಿದೆ.
ನಗರದ ಅಜೀಜ್ ಕಾಲೊನಿಯ ಉದ್ಯಾನದ ಬಳಿ ವಿದ್ಯುತ್ ಪರಿವರ್ತಕದ ಎತ್ತರಕ್ಕೆ ಹಸಿರು ಬಳ್ಳಿ ಹಬ್ಬಿತ್ತು. ಅದನ್ನು ತೆರವುಗೊಳಿಸಿ ಸ್ವಚ್ಛ ಮಾಡಲಾಗಿದೆ. ಅಲ್ಲದೆ ಬುಡ ಸಮೇತ ಗಿಡಗಳನ್ನು ಕಿತ್ತು ಹಾಕಲಾಗಿದೆ. ಈ ಮೂಲಕ ಆ ಭಾಗದಲ್ಲಿ ಮತ್ತೊಮ್ಮೆ ಬಳ್ಳಿ ಹಬ್ಬದಂತೆ ಕ್ರಮ ಕೈಗೊಳ್ಳಲಾಗಿದೆ.
ಹಸಿರು ಬಳ್ಳಿ ಹಬ್ಬಿರುವುದರಿಂದ ಶಾರ್ಟ್ ಸರ್ಕ್ಯೂಟ್ ಆಗುವ ಸಂಭವವಿದೆ ಎಂದು ಎಚ್ಚರಿಸಲಾಗಿತ್ತು. ಹೀಗಾಗಿ ಜೆಸ್ಕಾಂ ಅಧಿಕಾರಿಗಳು ತೆರವುಗೊಳಿಸುವ ಮೂಲಕ ಕ್ರಮ ಕೈಗೊಂಡಿದ್ದಾರೆ.
ಕೆಲಕಡೆ ಮಾತ್ರ ಹಸಿರು ಬಳ್ಳಿ ತೆರವುಗೊಳಿಸುವ ಕೆಲಸ ಬಿಟ್ಟು ನಗರದ ಎಲ್ಲ ಕಡೆ ಅದನ್ನು ಮಾಡಬೇಕು ಎಂದು ನಗರದ ಮಾರೆಪ್ಪ ನಂದಿಹಳ್ಳಿ ಆಗ್ರಹಿಸುತ್ತಾರೆ.
ಹೊಸ ಟಿಸಿಗೆ ತಂತಿ ಬೇಲಿ: ನಗರದ ವಿವಿಧೆಡೆ ಈಗ ಹೊಸ ವಿದ್ಯುತ್ ಪರಿವರ್ತಕ ಅಳವಡಿಸುವಾಗ ಕಡ್ಡಾಯವಾಗಿ ತಂತಿ ಬೇಲಿ ಅಳವಡಿಸುವ ಕಾರ್ಯ ಮಾಡಲಾಗುತ್ತಿದೆ. ಈ ಮೂಲಕ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತಿದೆ.
‘ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿವ್ಯವಸ್ಥಾಪಕ ನಿರ್ದೇಶಕಿಡಾ.ಆರ್.ರಾಗಪ್ರಿಯಾ ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಹೀಗಾಗಿ ನಗರದಲ್ಲಿರುವ ತಂತಿ ಬೇಲಿ ಇಲ್ಲದವುಗಳಿಗೆ ಕೆಕೆಆರ್ಡಿಬಿ ವತಿಯಿಂದ ಅನುದಾನ ಮಂಜೂರು ಮಾಡಿಕೊಂಡು ಅಲ್ಲಿ ಅಳವಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಜೆಸ್ಕಾಂ ಇಇ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
***
ಜೆಸ್ಕಾಂ ವತಿಯಿಂದ ವಿದ್ಯುತ್ ಪರಿವರ್ತಕಕ್ಕೆ ಹಬ್ಬಿರುವ ಹಸಿರು ಬಳ್ಳಿ ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ. ಹಾಗೇಯೆ ಬಿಟ್ಟರೆ ಶಾಕ್ ಹೊಡೆಯುವ ಸಂಭವ ಇರುತ್ತದೆ
- ರಾಘವೇಂದ್ರ ಡಿ. ಜೆಸ್ಕಾಂ ಇಇ
***
ನಗರದ ವಿವಿಧೆಡೆ ಮಳೆಗಾಲದಲ್ಲಿ ವಿದ್ಯುತ್ ಪರಿವರ್ತಕಗಳಿಗೆ ಹಸಿರು ಬಳ್ಳಿ ಹಬ್ಬಿದೆ. ಜೆಸ್ಕಾಂ ಸಿಬ್ಬಂದಿ ಇದನ್ನು ತೆರವುಗೊಳಿಸುವ ಕಾರ್ಯ ಮಾಡಿದ್ದಾರೆ.
- ಮಲ್ಲು ಚಾಪಲ, ನಗರ ನಿವಾಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.