ಯಾದಗಿರಿ: ‘ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸಂಸದ ಎ.ನಾರಾಯಣಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡುವ ಮೂಲಕ ಮಾದಿಗ ಸಮಾಜಕ್ಕೆ ನ್ಯಾಯ ಒದಗಿಸಿದೆ’ ಎಂದು ಮಾದಿಗ ಸಮಾಜದ ಮುಖಂಡ ನಿಂಗಪ್ಪ ಹತ್ತಿಮನಿ ಹೇಳಿದರು.
ನಗರದ ಅಂಬೇಡ್ಕರ್ ವೃತದಲ್ಲಿ ಬುಧವಾರ ಜಮಾಯಿಸಿದ ಮಾದಿಗ ಸಮಾಜದ ಮುಖಂಡರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಮಾತನಾಡಿದರು.
‘ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯ ಹಾಗೂ ಸರ್ವರಿಗೂ ಸಮಬಾಳು ಸಮಪಾಲು ಎಂಬ ತತ್ವವನ್ನು ಅನುಸರಿಸುತ್ತಿದೆ. ಪ್ರಧಾನಿ ಮೋದಿ ಸರ್ಕಾರ ಎಲ್ಲರಿಗೂ ಸಮಾನತೆ ಹಾಗೂ ಅಧಿಕಾರ ನೀಡುವ ಮೂಲಕ ಸಮರ್ಥ ಆಡಳಿತ ನೀಡುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
ಸಮಾಜದ ಮುಖಂಡರಾದ ನಿಂಗಪ್ಪ ವಡ್ನಳ್ಳಿ, ಸುಭಾಷ್ ಮಾಳಿಕೇರಿ, ಹಣಮಂತ ಲಿಂಗೇರಿ, ನಗರಸಭೆ ಸದಸ್ಯ ಸ್ವಾಮಿದೇವ ದಾನಸಕೇರಿ, ಹಣಮಂತ ಇಟಗಿ, ಶಿವರಾಜ ದಾಸನಕೇರಿ, ಶಿವು ಮುದ್ನಾಳ, ಮೈಲಾರಿ ಜಾರ್ಗಿದಾರ್, ಮರ್ತಾಂಡಪ್ಪ ಮುಸ್ಟೂರ್, ಶ್ರೀನಿವಾಸ ಈಟೇಕರ್, ಮಹಾದೇವಪ್ಪ ಚಾಮನಾಳ, ಮಂಜುನಾಥ ಎಂ ದಾಸನಕೇರಿ, ಶ್ರೀಕಾಂತ ಸುಂಗಲಕರ್, ಅಂಬರೇಶ ಹತ್ತಿಮನಿ, ಶರಣು ಮುಸ್ಟೂರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.