ADVERTISEMENT

ಯರಗೋಳ: ಕೊಳವೆಬಾವಿಯಿಂದ ಉಕ್ಕಿ ಹರಿದ ನೀರು

ರಮಣೀಯ ದೃಶ್ಯ ನೋಡಲು ಹೊಲಕ್ಕೆ ಗ್ರಾಮಸ್ಥರು ಭೇಟಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 2:48 IST
Last Updated 22 ಅಕ್ಟೋಬರ್ 2020, 2:48 IST
ಯರಗೋಳ ಗ್ರಾಮದ ಹೊಲದಲ್ಲಿ ಕೊಳವೆಬಾವಿಯಿಂದ ನೀರು ಚಿಮ್ಮುತ್ತಿರುವುದು
ಯರಗೋಳ ಗ್ರಾಮದ ಹೊಲದಲ್ಲಿ ಕೊಳವೆಬಾವಿಯಿಂದ ನೀರು ಚಿಮ್ಮುತ್ತಿರುವುದು   

ಯರಗೋಳ: ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಜೋರಾದ ಮಳೆಯಿಂದಾಗಿ ಗ್ರಾಮದ ರೈತರೊಬ್ಬರ ಹೊಲದಲ್ಲಿನ ಕೊಳವೆಬಾವಿಯೊಂದರಿಂದ ನೀರು ಉಕ್ಕಿ ಹರಿಯುತ್ತಿದೆ.

ಗ್ರಾಮದ ರೈತ ಮಹಿಳೆ ದೇವಕೆಮ್ಮ ಎಸ್.ಗುಳೇದ್‌ ಅವರ ಹೊಲದಲ್ಲಿರುವ ಕೊಳವೆಬಾವಿಯಲ್ಲಿ 5 ದಿನಗಳಿಂದ ನೀರು ಚಿಮ್ಮುತ್ತಿದ್ದು, ಗ್ರಾಮಸ್ಥರಲ್ಲಿ ಕುತೂಹಲ ಹೆಚ್ಚಿಸಿದೆ.

ಕೊಳವೆಬಾವಿಯಿಂದ ನೀರು ಚಿಮ್ಮುತ್ತಿರುವ ಕಾರಣ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೊಳವೆಬಾವಿಯ ಮೋಟರ್‌ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ADVERTISEMENT

‘ನಮ್ಮ ಹೊಲಕ್ಕೆ ಅಂಟಿಕೊಂಡ ಗ್ರಾಮದ ದೊಡ್ಡ ಕೆರೆ 10 ವರ್ಷಗಳ ಬಳಿಕ ತುಂಬಿದೆ. ಭೂಮಿಯಲ್ಲಿ ಅಂತರ್ಜಲ ಹೆಚ್ಚಳದಿಂದ ಕೊಳವೆಬಾವಿಗಳಲ್ಲಿ ನೀರು ಚಿಮ್ಮುತ್ತಿದೆ. ರೈತರ ಮೊಗದಲ್ಲಿ ಸಂತಸದ ಕಳೆ ಮೂಡಿದೆ. ಬೇಸಿಗೆಯಲ್ಲಿ ಕೃಷಿ ಬಳಕೆಗೆ, ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲ ಆಗುತ್ತದೆ’ ಎಂದು ದೇವಕೆಮ್ಮ ಅವರ ಪುತ್ರ ವಿಶ್ವರಾಧ್ಯ ಎಸ್.ಗುಳೇದ್‌ ಖುಷಿಯಿಂದ ನುಡಿದರು.

ಕೊಳವೆಬಾವಿಯಿಂದ ಚಿಮುತ್ತಿರುವ ಶುದ್ಧ ನೀರನ್ನು ರೈತರು, ದಾರಿಹೋಕರು, ಥಾವರುನಾಯಕ, ಕೇಮುನಾಯಕ ತಾಂಡಾ ನಿವಾಸಿಗಳು ಬಳಕೆ ಮಾಡುತ್ತಿದ್ದಾರೆ.

ಕೊಳವೆಬಾವಿಯಿಂದ ನೀರು ಚಿಮ್ಮುವ ರಮಣೀಯ ದೃಶ್ಯ ನೋಡಲು, ಗ್ರಾಮಸ್ಥರು, ಯುವಕರು ಬರುತ್ತಿದ್ದು, ಮೊಬೈಲ್‌ಗಳಲ್ಲಿ ಫೋಟೊ ಕ್ಲಿಕ್ಕಿಸಿ ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಹರಿಬಿಟ್ಟು ಸಂಭ್ರಮಿಸುತ್ತಿದ್ದಾರೆ.

ಹೊಲಗಳಲ್ಲಿ ನೀರು: ದೊಡ್ಡ ಕೆರೆ ತುಂಬಿ ಹರಿಯುತ್ತಿದೆ. ಕೆರೆಗೆ ಅಂಟಿಕೊಂಡಿರುವ ಹೊಲಗಳಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ಹತ್ತಿ ಬೆಳೆ ನೀರಲ್ಲಿ ಮುಳುಗಡೆಯಾಗಿದೆ. ಕೇಮುನಾಯಕ ತಾಂಡಾಕ್ಕೆ ಸಂಪರ್ಕಿಸುವ ಡಾಂಬರ್ ರಸ್ತೆ ಮೇಲೆ ಕೆರೆಯ ನೀರು ಹರಿಯಿತ್ತಿದ್ದು, ತಾಂಡಾ ನಿವಾಸಿಗಳ ದಿನನಿತ್ಯದ ಸಂಚಾರಕ್ಕೆ ತೊಂದರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.