ADVERTISEMENT

ಜೀವನಕ್ಕೆ ನೀರು ಅತ್ಯವಶ್ಯ: ಜಲ ಜೀವನ ಮಿಷನ್ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಬೀರನೂರ: ಜಲ ಜೀವನ ಮಿಷನ್ ಕಾಮಗಾರಿಗಳಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 5:00 IST
Last Updated 12 ಜೂನ್ 2022, 5:00 IST
ಯಾದಗಿರಿ ಮತಕ್ಷೇತ್ರದ ಕಾಟಮನಳ್ಳಿ ಗ್ರಾಮದಲ್ಲಿ ಶನಿವಾರ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಸಂಸದ ರಾಜಾ ಅಮರೇಶ್ವರ ನಾಯಕ ಭೂಮಿಪೂಜೆ ನೆರವೇರಿಸಿದರು
ಯಾದಗಿರಿ ಮತಕ್ಷೇತ್ರದ ಕಾಟಮನಳ್ಳಿ ಗ್ರಾಮದಲ್ಲಿ ಶನಿವಾರ ಜಲಜೀವನ ಮಿಷನ್ ಯೋಜನೆಯ ಕಾಮಗಾರಿಗೆ ಸಂಸದ ರಾಜಾ ಅಮರೇಶ್ವರ ನಾಯಕ ಭೂಮಿಪೂಜೆ ನೆರವೇರಿಸಿದರು   

ಯಾದಗಿರಿ: ‘ನೀರು ಮನುಷ್ಯ ಸೇರಿದಂತೆ ಜೀವಸಂಕುಲಕ್ಕೆ ಅತ್ಯವಶ್ಯಕವಾಗಿದೆ. ಆರೋಗ್ಯ ಸಂರಕ್ಷಣೆಯಲ್ಲಿ ನೀರಿನ ಪಾತ್ರ ಅತಿ ಮುಖ್ಯವಾದುದು. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಲ ಜೀವನ ಮಿಷನ್ ಮತ್ತು ಜಲಧಾರೆ ಮೂಲಕ ಪ್ರತಿ ಮನೆಗೂ ಶುದ್ಧ ನೀರು ಪೂರೈಕೆಯ ಯೋಜನೆ ರೂಪಿಸಿವೆ’ ಎಂದು ರಾಯಚೂರ ಸಂಸದ ರಾಜಾ ಅಮರೇಶ್ವರ ನಾಯಕ
ಹೇಳಿದರು.

ಯಾದಗಿರಿ ಜಿಲ್ಲೆ ಶಹಪೂರ ತಾಲ್ಲೂಕಿನ ಬೀರನೂರ, ಮರಕಲ್, ಟೊಣ್ಣೂರ, ಗೌಡೂರು, ಕಾಟಮನಳ್ಳಿ ಗ್ರಾಮಗಳಲ್ಲಿ 2021-22ನೇ ಸಾಲಿನ ಜಲ ಜೀವನ ಮಿಷನ್ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನು ಮಹಾತ್ವಾಕಾಂಕ್ಷಿ ಯೋಜನೆಯಲ್ಲಿ ಗುರುತಿಸಿದ್ದು, ಯಾದಗಿರಿ ಜಿಲ್ಲೆಯಲ್ಲಿ ₹1400 ಕೋಟಿ ಅನುದಾನದ ಹಾಗೂ ರಾಯಚೂರು ಜಿಲ್ಲೆಯ ₹2800 ಕೋಟಿ ಅನುದಾನದ ಜಲಧಾರೆ ಯೋಜನೆಯ ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ತಿಳಿಸಿದರು.

ADVERTISEMENT

ಸರ್ಕಾರದ ವಿವಿಧ ಯೋಜನೆಗಳ ಲಾಭವನ್ನು ಸ್ಥಳೀಯ ನಾಯಕರು ಗ್ರಾಮೀಣ ಪ್ರದೇಶಗಳಿಗೆ ತಲುಪಿಸಲು ಶ್ರಮಿಸಿ, ನರೇಗಾ ಅಡಿಯಲ್ಲಿ ಗ್ರಾಮೀಣ ಜನತೆಯ ಅನುಕೂಲಕ್ಕೆ ತಕ್ಕಂತೆ ಕಾಮಗಾರಿಗಳನ್ನು ಕೈಗೊಳ್ಳಬೇಕು. ಹಾಗಾದರೆ ಬದಲಾವಣೆ ಸಾಧ್ಯವಾಗಿ, ಅಭಿವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.

ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಶಾಸಕನಾದ 4 ವರ್ಷಗಳ ಅವಧಿಯಲ್ಲಿ ಗ್ರಾಮೀನ ಜನತೆಗೆ ಅವಶ್ಯಕವಾದ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಇನ್ನೂ ಹಲವು ಕೆಲಸಗಳು ಬಾಕಿಯಿದ್ದು, ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದುಕೊಂಡು ಜನತೆಯ ನಿರೀಕ್ಷೆಯಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಗುತ್ತಿಗೆದಾರರು ಕಾಮಗಾರಿ ಗುಣಮಟ್ಟದಲ್ಲಿ ರಾಜಿಯಿಲ್ಲದೆ ಕೆಲಸ ಮಾಡಬೇಕು, ಸಂಬಂಧಿತ ಅಧಿಕಾರಿಗಳು ಪರಿಶೀಲನೆ ನಡೆಸಿ. ಕೊಳ್ಳೂರು ಗ್ರಾಮವು ಸಂಸದರ ಆದರ್ಶಗ್ರಾಮ ಯೋಜನೆಗೆ ಆಯ್ಕೆಯಾಗಿದ್ದು, ಜನರು ಅಭಿವೃದ್ಧಿಗೆ ಬೇಕಾದ ಕಾಮಗಾರಿಗಳನ್ನು ಮಾಡಿಸಿಕೊಳ್ಳಿ ಎಂದರು.

ರಾಜಾ ವೇಣು ಮಾದವ ನಾಯಕ, ಚನ್ನರೆಡ್ಡಿ ಮದರಕಲ್, ಸಿದ್ದಣಗೌಡ ಕಾಡಂನೋರ, ವೀರಣ್ಣಗೌಡ ಟೊಣ್ಣೂರು, ಚಂದ್ರಶೇಖರ ಮರಕಲ, ರಾಜಶೇಖರ ಕಾಡಂನೋರ, ನಿಂಗಯ್ಯ ಕಾವಲಿ, ಮಲ್ಲಿಕಾರ್ಜುನಗೌಡ ಪಾಟೀಲ್, ಸಿದ್ದಪ್ಪ ಬೀರನೂರ, ದೇವಮ್ಮ ಚಂದಯ್ಯ, ಇಒ ಬಸವರಾಜ ಸಜ್ಜನ್, ಇಇರಾಹುಲ ಕಾಂಭ್ಳೆ, ಶಿವಪುತ್ರಪ್ಪ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.