ಯಾದಗಿರಿ: ಹೈಯ್ಯಾಳ ಕೆ. ಗ್ರಾಮದಲ್ಲಿ ಶಿಥಿಲಗೊಂಡ ಟ್ಯಾಂಕ್ ಕುಸಿದು ಬೀಳುವ ಹಂತಕ್ಕೆ ತಲುಪಿದ್ದು, ಗ್ರಾಮಸ್ಥರು ಜೀವ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಹೌದು ಇದು ವಡಗೇರಾ ತಾಲ್ಲೂಕಿನ ಟಿ.ವಡಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹೈಯ್ಯಾಳ ಕೆ. ಗ್ರಾಮದ ಚಿತ್ರಣ. 1,200 ಮತಗಳು, 1,800 ಜನಸಂಖ್ಯೆ, 4 ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. ಗ್ರಾಮಪಂಚಾಯಿತಿ ವ್ಯಾಪ್ತಿಗೆ ಮೂರು ಗ್ರಾಮಗಳು ಒಳಪಡುತ್ತವೆ. ಟಿ. ವಡಗೇರಾ 7, ಹೈಯ್ಯಾಳ ಕೆ. 4, ಅನವಾರ 4 ಗ್ರಾಮ ಪಂಚಾಯಿತಿ ಸದಸ್ಯರನ್ನು ಒಳಗೊಂಡಂತೆ 15 ಸದಸ್ಯರಿದ್ದಾರೆ.
ಹಳೆಯದಾದ ನೀರಿನ ಟ್ಯಾಂಕ್:ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡು ಓವರ್ ಹೆಡ್ ಟ್ಯಾಂಕ್ ಇದ್ದು, ಅದರ ಅಕ್ಕಪಕ್ಕದಲ್ಲಿಯೇ ತಿಪ್ಪೆಗುಂಡಿಗಳಿವೆ. ಕಸ ಹಾಕಲು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕಿದೆ. ಹಲವಾರು ವರ್ಷಗಳ ಹಿಂದೆ ಟ್ಯಾಂಕ್ ನಿರ್ಮಾಣವಾಗಿದ್ದು, ಕಂಬಿಗಳು ಹೊರಗಡೆ ಬಂದಿವೆ. ನೀರಿನ ಟ್ಯಾಂಕ್ ಹಳೆಯದಾಗಿದ್ದು, ನೀರು ಸೋರುತ್ತಿದೆ. ಇದು ಯಾವಾಗ ಬೇಕಾದರೂ ಕುಸಿದು ಬೀಳುವಂತಿದೆ.
ಕಿತ್ತುಹೋದ ಸಿಸಿ ರಸ್ತೆ:ಗ್ರಾಮದಲ್ಲಿ ಸಿಸಿರಸ್ತೆ ಸಿಮೆಂಟ್ ಕಿತ್ತುಹೋಗಿದೆ, ಕಲ್ಲುಗಳು ಮೇಲೆದ್ದಿವೆ. ಮಕ್ಕಳು, ವೃದ್ಧರು ನಡೆದಾಡಲು ಪ್ರಯಾಸ ಪಡುತ್ತಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೊತ್ತಿದ್ದರೂ ಸುಮ್ಮನೆ ಇದ್ದಾರೆ ಎಂಬುದು ಗ್ರಾಮಸ್ಥರ ಆರೋಪ.
ತುಂಬಿಹೋದ ಚರಂಡಿ:ಚರಂಡಿ ತುಂಬಿ ಸುಮಾರು ದಿನಗಳಾದರೂ ಹೂಳು ತೆಗೆಯದಿದ್ದರಿಂದ ಮಲೀನ ನೀರು ನಿಂತು ಗಬ್ಬು ನಾರುತ್ತಿದೆ. ಕೆಲವೊಮ್ಮೆ ರಸ್ತೆಗೆ ಬಂದು ನಿಲ್ಲುತ್ತದೆ. ಅದರಲ್ಲಿಯೇ ನಡೆದಾಡುವ ಪರಿಸ್ಥಿತಿ ಇದೆ.
ನೀರಿನ ಸಮಸ್ಯೆ:ಗ್ರಾಮದಿಂದ 4 ಕಿ.ಮೀ. ಅಂತರದಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ಅಲ್ಲಿಂದ ನೀರು ಪೂರೈಕೆ ಆಗುತ್ತದೆ. ಆಗಾಗ ನೀರಿನ ಪೈಪ್ ಒಡೆದು ಸಮಸ್ಯೆ ಉಂಟು ಮಾಡುತ್ತದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ದುರಸ್ತಿ ನೆಪದಲ್ಲಿ ಎರಡ್ಮೂರು ದಿನ ನೀರೇ ಬಿಡುವುದಿಲ್ಲ. ಎನ್ನುತ್ತಾರೆ ಗ್ರಾಮಸ್ಥರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.