ಸೈದಾಪುರ: ಜಿಲ್ಲೆಯ ಕಡೇಚೂರ-ಬಾಡಿಯಾಲ್ ಕೈಗಾರಿಕಾ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಕೈಗಾರಿಕಾ ಪ್ರದೇಶಕ್ಕೆ ಭೂಮಿ ಕಳೆದುಕೊಂಡ ರೈತರು ಮನವಿ ಸಲ್ಲಿಸಿದರು.
ಈ ಪ್ರದೇಶದಲ್ಲಿ ಕೈಗಾರಿಕೆಗಳು ಯಾವಾಗ ಬರುತ್ತವೆ. ನಮಗೆ ಯಾವಾಗ ಉದ್ಯೋಗ ಸಿಗುತ್ತದೆ ಎಂದು ಭೂಮಿ ಕಳೆದುಕೊಂಡ ಬಾಡಿಯಾಳ ಮತ್ತು ಕಡೇಚೂರ ಗ್ರಾಮದ ರೈತರ ನೋವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎದುರು ತೋಡಿಕೊಂಡರು.
ಒಂದು ದಶಕ ಕಳೆಯುತ್ತಿದೆ ಇಲ್ಲಿಯವರೆಗೂ ಯಾವ ಕಂಪನಿಗಳು ಸ್ಥಾಪನೆಯಾಗಿಲ್ಲ. ನಾವು ಭೂಮಿಯನ್ನು ನೀಡಿದರೆ ನಮ್ಮ ಮಕ್ಕಳಿಗೆ ಉದ್ಯೋಗ ದೊರಕುತ್ತದೆ ಎಂಬ ಆಶಾ ಮನೋಭಾವದಿಂದ ಭೂಮಿಯನ್ನು ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಕಾರ್ಖಾನೆಗಳು ಸ್ಥಾಪನೆಯಾಗಲಿ, ಕನಿಷ್ಠ ಪಕ್ಷ ಮಕ್ಕಳಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗ ದೊರಕುವಂತೆ ಮಾಡಿ ಎಂದು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಭಾಸ್ಕರರಾವ್, ಮುಂದಿನ ದಿನಗಳಲ್ಲಿ ಬಹೃತ್ ಕೈಗಾರಿಕೆಗಳ ಸ್ಥಾಪನೆಗೆ ಪ್ರಯತ್ನಿ ಸುತ್ತೇವೆ. ಕೈಗಾರಿಕೆ ಪ್ರದೇಶಕ್ಕೆ ಬೇಕಾದ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇಲ್ಲಿಯ ಜನರಿಗೆ ಉದ್ಯೋಗ ದೊರಕುವಂತೆ ಪ್ರಯತ್ನಿ ಸುತ್ತೇವೆ ಎಂದರು.
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಸಹಾಯಕ ಆಯುಕ್ತ ಶಂಕರಗೌಡ ಸೋ ಮನಾಳ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ರೈತರಾದ ವಿಶ್ವನಾಥ ಘಂಟಿ, ಕಡೇಚೂರ ಗ್ರಾಪಂ ಅಧ್ಯಕ್ಷ ಭೀರಪ್ಪ, ದೇವು ಘಂಟಿ, ವೀರೇಶ ಸಜ್ಜನ್, ಮಹೇಶ ಘಂಟಿ, ಮಲ್ಲಪ್ಪ ಕಾವಲಿ, ಮಲ್ಲಪ್ಪ ಕೌಳೂರ, ನಿರಂಜನ ಗಣಪೂರ, ಶರಣು ಯಲ್ಹೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.