ಯಾದಗಿರಿ: ಮಾಜಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 17ರಂದು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅವರ ಪುತ್ರ, ಬಿಜೆಪಿ ಮುಖಂಡ ಮಹೇಶರಡ್ಡಿ ಮುದ್ನಾಳ ತಿಳಿಸಿದರು.
ನಗರದಲ್ಲಿ ಸೋಮವಾರ ಮುದ್ನಾಳ ಅವರ ಅನುಯಾಯಿಗಳು ಮತ್ತು ಅಭಿಮಾನಿಗಳು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ನಗರದ ಎನ್ವಿಎಂ ಹೋಟೆಲ್ ಪಕ್ಕದ ಮೈದಾನದಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು. ವಿವಿಧ ಮಠಾಧೀಶರ ಸಾನಿಧ್ಯ ವಹಿಸಲಿದ್ದು, ರಾಜಕೀಯ ಗಣ್ಯರು ಪಾಲ್ಗೊಳ್ಳುವರು. ಸುಮಾರು 10 ಸಾವಿರ ಜನರು ಸೇರುವ ನಿರೀಕ್ಷೆ ಇದೆ’ ಎಂದರು.
ಮುಖಂಡ ರಾಚಣ್ಣಗೌಡ ಮುದ್ನಾಳ ಮಾತನಾಡಿ, ‘ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹಮ್ಮಿಕೊಳ್ಳಲು ಈಗಿನಿಂದಲೇ ತಯಾರಿ ನಡೆಸಲಾಗುವುದು’ ಎಂದು ಹೇಳಿದರು.
ಸಭೆಯಲ್ಲಿ ಮುಖಂಡರಾದ ಮಲ್ಲಣಗೌಡ ಮಾಲಿಪಾಟೀಲ, ಉಮಾರಡ್ಡಿಗೌಡ ನಾಯ್ಕಲ್, ಮೋಹನ್ ಬಾಬು, ಬಸವರಾಜ ಚಂಡ್ರಕಿ, ರುದ್ರಗೌಡ, ಸದಾಶಿವಪ್ಪಗೌಡ ರೊಟ್ನಡಗಿ, ಸಿದ್ರಾಮರಡ್ಡಿಗೌಡ ಚನ್ನೂರ, ಮಾದೇವಪ್ಪ, ಸಿದ್ದಣ್ಣಗೌಡ ಕಾಡಂನೊರ, ಖಂಡಪ್ಪ ದಾಸನ್, ಸೋಮನಾಥ ಜೈನ್, ಮಹೇಶ್ ವಾಲಿ, ಮಲ್ಲಿಕಾರ್ಜುನ್ ಕರಿಗೌಡ, ಬಸವರಾಜ್ ಸೊನ್ನದ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.