ADVERTISEMENT

ಯಾದಗಿರಿ: ರೊಟ್ಟಿ ಕೊಡದಿರುವುದಕ್ಕೆ ಬೈದಿದ್ದ ಯುವಕನ ಕೊಲೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 5:06 IST
Last Updated 23 ಏಪ್ರಿಲ್ 2024, 5:06 IST
ರಾಕೇಶ್
ರಾಕೇಶ್   

ಯಾದಗಿರಿ: ರೊಟ್ಟಿ ಕೊಡದಿರುವುದಕ್ಕೆ ಬೈದಿದ್ದ ಯುವಕನನ್ನು ಅಂಗಡಿಯವರೇ ಸೇರಿಕೊಂಡು ಭಾನುವಾರ ರಾತ್ರಿ ಕೊಲೆ ಮಾಡಿದ್ದಾರೆ.

ನಗರದ ಹೆಂಡಗಾರ ಅಗಸಿ ನಿವಾಸಿ ರಾಕೇಶ್ (22) ಕೊಲೆಯಾದ ಯುವಕ. ರೊಟ್ಟಿ ಅಂಗಡಿಯ ಫಯಾಜ್, ಆಸೀಫ್‌ ಹಾಗೂ ಇತರರು ರಾಕೇಶ್‌ನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಯುವಕನ ತಾಯಿ ಮಂಜಮ್ಮ ನಗರ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ವಿವರ: ಫಯಾಜ್‌ ಮನೆಯಲ್ಲೇ ರೊಟ್ಟಿ ಅಂಗಡಿ ನಡೆಸುತ್ತಿದ್ದರು. ಮನೆ ಸಮೀಪದಲ್ಲೇ ಇದ್ದ ರೊಟ್ಟಿ ಅಂಗಡಿಗೆ ರಾಕೇಶ್‌ ರಾತ್ರಿಯಾದರೂ ಬಂದು ಮನೆ ಬಾಗಿಲು ಬಡಿದು ರೊಟ್ಟಿ ಕೇಳಿದ್ದ. ರೊಟ್ಟಿ ಇಲ್ಲವೆಂದು ಫಯಾಜ್‌ ಕುಟುಂಬದವರು ಹೇಳಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ರಾಕೇಶ್‌, ಯಾಕೆ ರೊಟ್ಟಿ ಅಂಗಡಿ ಇಟ್ಟಿದ್ದೀರಿ ಎಂದು ಬೈಯುತ್ತ ಮನೆಗೆ ಹೋಗಿದ್ದ. ತಡರಾತ್ರಿ ಫಯಾಜ್, ಆಸೀಫ್‌ ಹಾಗೂ ಇತರರು ರಾಕೇಶ್‌ ಮನೆಗೆ ಬಂದು, ರಾತ್ರಿ ರೊಟ್ಟಿ ಕೇಳಲು ಏಕೆ ಬಂದಿದ್ದೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಾತಿ ನಿಂದಿಸಿ ರಾಕೇಶ್‌ನನ್ನು ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

‘ಯುವಕನ‌ ಕೊಲೆಯನ್ನು ಮರೆಮಾಚಲು ಪೊಲೀಸರು ಯತ್ನಿಸಿದ್ದಾರೆ. ತಡರಾತ್ರಿ ಕೊಲೆಯಾದರೂ ಪ್ರಕರಣ ದಾಖಲಿಸಿಕೊಂಡಿರಲಿಲ್ಲ’ ಎಂದು ಯುವಕನ ಕುಟುಂಬದವರು ದೂರಿದ್ದಾರೆ. 

ಬಿಜೆಪಿ, ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಯುವಕನ ಕುಟುಂಬಕ್ಕೆ ಬೆಂಬಲ ನೀಡಿದ ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಎಸ್ಪಿ ಜಿ.ಸಂಗೀತಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.