ADVERTISEMENT

ಏಕರೂಪದ ಪಠ್ಯ: ಸಮಿತಿಗೆ ಸೇರಲು ಪ್ರಾಧ್ಯಾಪಕರ ನಕಾರ

​ಪ್ರಜಾವಾಣಿ ವಾರ್ತೆ
Published 26 ಮೇ 2020, 19:19 IST
Last Updated 26 ಮೇ 2020, 19:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಉನ್ನತ ಶಿಕ್ಷಣವನ್ನು ಉದ್ಯೋಗದಾಯಿ ಶಿಕ್ಷಣವಾಗಿ ರೂಪಿಸಬೇಕು, ಅದಕ್ಕಾಗಿ ಏಕರೂಪದ ಪಠ್ಯವನ್ನು ಅಳವಡಿಸಬೇಕು ಎಂಬ ಆಶಯದ ಅನುಷ್ಠಾನಕ್ಕೆ ಸಲಹೆ ನೀಡಲು ರಚಿಸಲಾಗಿರುವ ತಜ್ಞರ ಸಮಿತಿ ಸೇರಿಕೊಳ್ಳಲು ಕೆಲವು ಪ್ರಾಧ್ಯಾಪಕರು ಹಿಂದೇಟು ಹಾಕಿದ್ದಾರೆ.

ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಸಿದ್ದೇಗೌಡ ಅಧ್ಯಕ್ಷತೆಯಲ್ಲಿ ಇದೀಗ ಕಲಾ ನಿಕಾಯದ 34 ವಿಭಾಗಗಳಲ್ಲಿ ಸೂಕ್ತ ಪಠ್ಯಕ್ರಮ ರಚಿಸುವ ಸಂಬಂಧ ತಜ್ಞರ ಸಮಿತಿಗಳನ್ನು ರಚಿಸಲಾಗಿದೆ. ಕನ್ನಡ ವಿಭಾಗದ ತಜ್ಞರ ಸಮಿತಿ ಸೇರಿಕೊಳ್ಳಲು ಒಂದಿಬ್ಬರು ಪ್ರಾಧ್ಯಾ‍ಪಕರು ಹಿಂದೇಟು ಹಾಕಿದ್ದಾರೆ.

‘ಸಾಹಿತ್ಯ ಎಂಬುದು ಬಹಳ ವಿಸ್ತಾರವಾದುದು. ಪ್ರಾದೇಶಿಕ ಸೊಗಡನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಆಳವಾಗಿ ಅಧ್ಯಯನ ನಡೆಸಬೇಕಾಗುತ್ತದೆ. ಇಂತಹ ಬಹುತ್ವದ ವಿಷಯವನ್ನು ಸೆಮಿಸ್ಟರ್‌ ಹಂತಕ್ಕೆ ಇಳಿಸುವುದು ಸಮಂಜಸವಲ್ಲ ಎಂಬ ಕಾರಣಕ್ಕೆ ಸಮಿತಿಯನ್ನು ಸೇರಿಕೊಳ್ಳಲು ಬಯಸಲಿಲ್ಲ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ‌’ಗೆ ತಿಳಿಸಿದರು.

ADVERTISEMENT

‘ಏಕರೂಪದ ಪಠ್ಯದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವಲ್ಲಿಯೇ ತಪ್ಪಾಗಿದೆ. ಇದು ಬಹುರೂಪಿ ವ್ಯವಸ್ಥೆಯಲ್ಲಿನ ಸಾರವನ್ನು ಸಂಗ್ರಹಿಸಿ ಆಯ್ಕೆಯ ಅವಕಾಶ ಕಲ್ಪಿಸುವ ಪ್ರಯತ್ನ. ಒಬ್ಬರೋ, ಇಬ್ಬರೋ ಸಮಿತಿಯಲ್ಲಿ ಸೇರಿಕೊಳ್ಳದಿದ್ದರೆ ಏನೂ ಆಗುವುದಿಲ್ಲ. ಆಸಕ್ತ ಇತರ ತಜ್ಞರನ್ನು ಸೇರಿಸಿಕೊಂಡು ಯೋಜನೆ ಪೂರ್ಣಗೊಳಿಸಲಾಗುವುದು‘ ಎಂದು ಕುಲಪತಿ ಡಾ.ಸಿದ್ದೇಗೌಡ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.