ADVERTISEMENT

ಧಾರವಾಡ: ಅಂಚೆಯಣ್ಣನ ಮಗಳಿಗೆ, ಉಪನ್ಯಾಸಕರ ಪುತ್ರಿಗೆ 7ನೇ ರ‍್ಯಾಂಕ್‌

ಇ.ಎಸ್.ಸುಧೀಂದ್ರ ಪ್ರಸಾದ್
Published 15 ಏಪ್ರಿಲ್ 2019, 20:00 IST
Last Updated 15 ಏಪ್ರಿಲ್ 2019, 20:00 IST
ರೋಹಿಣಿ ಕಟ್ಟಿ
ರೋಹಿಣಿ ಕಟ್ಟಿ   

ಧಾರವಾಡ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಷಯದಲ್ಲಿ ನಗರದ ಇಬ್ಬರು ವಿದ್ಯಾರ್ಥಿನಿಯರು ತಲಾ 588 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 7ನೇ ರ‍್ಯಾಂಕ್‌ ಪಡೆದಿದ್ದಾರೆ.

ಅಂಚೆ ಇಲಾಖೆಯಲ್ಲಿ ಪೋಸ್ಟ್‌ಮನ್‌ ಆಗಿ ಕೆಲಸ ಮಾಡುವ ಕೇಶವ ಕಟ್ಟಿ ಮತ್ತು ಶಕುಂತಲಾ ಪುತ್ರಿ ರೋಹಿಣಿ ಕಟ್ಟಿ ಮತ್ತು ಉಪನ್ಯಾಸಕ ದಂಪತಿಯಾದ ನಟರಾಜ ಕುಲಕರ್ಣಿ ಮತ್ತು ಸುನೀತಾ ಜೋಗ್ ಅವರ ಪುತ್ರಿ ಸೃಜನಾ ಕುಲಕರ್ಣಿ ಈ ಸಾಧನ ಮಾಡಿದವರು.

ನಗರದ ಪ್ರಿಸಂ ಕಾಲೇಜಿನಲ್ಲಿ ಪಿಯಿಸಿ ಓದಿದ ರೋಹಿಣಿ ಕಟ್ಟಿ ಭೌತವಿಜ್ಞಾನದಲ್ಲಿ 99, ರಸಾಯನವಿಜ್ಞಾನ– 100, ಗಣಿತ– 100, ಜೀವವಿಜ್ಞಾನ– 98, ಇಂಗ್ಲಿಷ್– 91, ಸಂಸ್ಕೃತ– 100 ಅಂಕ ಗಳಿಸಿದ್ದಾರೆ. ಇವರ ತಂದೆ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಪೋಸ್ಟ್‌ಮನ್‌ ಆಗಿರುವ ಇವರ ತಂದೆ ಕೇಶವ ಕಟ್ಟಿ ಮಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಆಕೆ ಏನು ಓದುತ್ತಾಳೋ ಅದನ್ನು ಓದಿಸಲು ಸಿದ್ಧ ಎಂದೆನ್ನುತ್ತಾರೆ ಅವರು.

ADVERTISEMENT

ತನ್ನ ಸಾಧನೆ ಕುರಿತು ಮಾತನಾಡಿದ ರೋಹಿಣಿ, ‘ಅಂದಿನ ಪಾಠವನ್ನು ಅಂದೇ ಓದಿ ಪೂರ್ಣಗೊಳಿಸುತ್ತಿದ್ದೆ. ನಿತ್ಯ ಕನಿಷ್ಠ ಏಳು ಗಂಟೆ ಓದುವುದು ನನ್ನ ಅಭ್ಯಾಸ. ಕಾಲೇಜಿನಿಂದಲೂ ಬಹಳಷ್ಟು ಪ್ರೋತ್ಸಾಹ ಸಿಕ್ಕಿತು. ಪಾಲಕರೂ ಸದಾ ನನ್ನ ಬೆನ್ನಿಗೆ ನಿಂತಿದ್ದಾರೆ. 590ಕ್ಕೂ ಅಧಿಕ ಅಂಕಗಳನ್ನು ನಿರೀಕ್ಷಿಸುತ್ತಿದ್ದೆ. ಉತ್ತರ ಪತ್ರಿಕೆ ಪ್ರತಿ ತರಿಸಿ ಮುಂದಿನ ಕ್ರಮದ ಕುರಿತು ಯೋಚಿಸುತ್ತೇನೆ. ಸದ್ಯ ನೀಟ್‌ ಪರೀಕ್ಷೆಗೆ ಸಿದ್ಧಳಾಗುತ್ತಿದ್ದೇನೆ. ವೈದ್ಯೆಯಾಗಬೇಕೆಂಬ ಗುರಿ ಇದೆ’ ಎಂದರು.

ಸ್ಕೌಟ್ ಮತ್ತು ಗೈಡ್ಸ್‌ನಲ್ಲಿ ರಾಷ್ಟ್ರಪತಿ ಮತ್ತು ರಾಜ್ಯಪಾಲರ ಪ್ರಶಸ್ತಿ ಪಡೆದ ಸೃಜನಾ ಕುಲಕರ್ಣಿ ಚರ್ಚಾಸ್ಪರ್ಧೆ, ಪ್ರಬಂಧ ಬರೆಯುವುದು, ಕಾರ್ಯಕ್ರಮ ನಿರೂಪಣೆಯಲ್ಲಿ ಅತೀವ ಆಸಕ್ತಿ ಹೊಂದಿರುವ ವಿದ್ಯಾರ್ಥಿ. ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಈಕೆಯ ತಂದೆ ಮತ್ತು ತಾಯಿ ಮಗಳ ಸಾಧನೆಗೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಸೃಜನಾ ಭೌತವಿಜ್ಞಾನದಲ್ಲಿ– 98, ರಸಾಯನ ವಿಜ್ಞಾನ– 97, ಗಣಿತ– 99, ಜೀವವಿಜ್ಞಾನ– 98, ಇಂಗ್ಲಿಷ್– 96, ಸಂಸ್ಕೃತ– 100 ಅಂಕ ಪಡೆದಿದ್ದಾರೆ. ಇನ್ನೂ ಹೆಚ್ಚಿನ ಅಂಕದ ನಿರೀಕ್ಷೆಯಲ್ಲಿದ್ದ ಸೃಜನಾ ತನ್ನ ಸಾಧನೆ ಕುರಿತು ಮಾತನಾಡಿ, ‘ಕಾಲೇಜಿನಲ್ಲೇ ಸಾಕಷ್ಟು ಪಾಠ ಮಾಡುತ್ತಿದ್ದುದರಿಂದ ಮತ್ತು ಉಪನ್ಯಾಸಕರು ನಮ್ಮ ಕುರಿತು ಸಾಕಷ್ಟು ಕಾಳಜಿ ವಹಿಸಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ. ಡಿಸೆಂಬರ್‌ನಿಂದ ನಿರಂತರ ಪರೀಕ್ಷೆ ಇನ್ನಷ್ಟು ಪಕ್ವವಾಗಲು ಸಾಧ್ಯವಾಯಿತು. ವೈದ್ಯೆಯಾಗಬೇಕು ಎಂಬ ಗುರಿ ಇದೆ’ ಎಂದರು.

ಮಗಳ ಸಾಧನೆ ಕುರಿತು ಪ್ರತಿಕ್ರಿಯಿಸಿದ ಸುನೀತಾ, ‘10ನೇ ತರಗತಿಯಲ್ಲೂ 10 ಸಿಜಿಪಿಎ ಪಡೆದಿದ್ದಳು. ಪಠ್ಯದ ಜತೆಯಲ್ಲಿ ಪಠ್ಯೇತರ ಚುಟವಟಿಕೆಯಲ್ಲೂ ಆಕೆ ಚಟುವಟಿಕೆಯಲ್ಲೂ ಮುಂದಿದ್ದಾಳೆ. ಮುಂಜಾನೆ ಬೇಗ ಎದ್ದು ಓದುತ್ತಿದ್ದಳು. ಮಗಳ ಸಾಧನೆ ಸಂತಸ ತಂದಿದೆ. ಈ ಸಾಧನೆಯ ಶ್ರೇಯ ಕಾಲೇಜಿನ ಇಡೀ ಸಿಬ್ಬಂದಿಗೆ ಸಲ್ಲಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.