ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಕೇಂದ್ರ ಶಬ್ದನಾ ಇದೇ 22ರಂದು ವಿಜ್ಞಾನ ಮತ್ತು ಅನುವಾದ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ.
ವಿಜ್ಞಾನ ಅನುವಾದಕ ಕೆ.ಪುಟ್ಟಸ್ವಾಮಿ ಅವರು ಉಪನ್ಯಾಸ ನೀಡಲಿದ್ದು, ಸಂವಾದದಲ್ಲಿ ವಿಜ್ಞಾನ ಕಥೆಗಾರ್ತಿ ಸವಿತಾ ಶ್ರೀನಿವಾಸ ಮತ್ತು ಪರಿಸರವಾದಿ ಪ್ರದೀಪ್ ಕೆಂಜಿಗೆ ಪಾಲ್ಗೊಳ್ಳುವರು. ಹಿರಿಯ ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅಧ್ಯಕ್ಷತೆ ವಹಿಸುವರು.
ಹೊಸಗನ್ನಡ ಸಾಹಿತ್ಯದ ಆದಿಯಿಂದಲೂ ಕನ್ನಡವನ್ನು ಇಂದಿನ ವೈಜ್ಞಾನಿಕ ಅಗತ್ಯಗಳ ಜ್ಞಾನದ ಭಾಷೆಯಾಗಿ ಬೆಳೆಸಲು ಹಲವು ಪ್ರಯತ್ನಗಳಾಗಿವೆ. ಅವುಗಳಲ್ಲಿ ಅನುವಾದಗಳೂ ತಮ್ಮ ಕೊಡುಗೆ ನೀಡಿವೆ. ಡಾ. ಶಿವರಾಮ ಕಾರಂತ, ಪ್ರೊ. ಜಿ.ಟಿ.ನಾರಾಯಣ ರಾವ್ ಮೊದಲಾದವರು ವಿಜ್ಞಾನ ಅನುವಾದ ಕುರಿತು ತಮ್ಮ ವಿಚಾರಗಳನ್ನು ಭಿನ್ನ ನೆಲೆಗಳಲ್ಲಿ ಪ್ರತಿಪಾದಿಸಿದ್ದಾರೆ ಎಂದು ಭಾಷಾಂತರ ಕೇಂದ್ರದ ಗೌರವ ನಿರ್ದೇಶಕ ಎಸ್.ಆರ್. ವಿಜಯಶಂಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ವಿಜ್ಞಾನದ ಕಲಿಕೆ ಹೈಸ್ಕೂಲಿನ ಕೊನೆ ಹಂತದವರೆಗೂ ಬೆಳೆಯಲು ಅಂತಹ ಪ್ರಯತ್ನಗಳು ಸಹಕಾರಿಯಾದವು. ಈಚೆಗೆ ಇಂಗ್ಲಿಷ್ ಮಾಧ್ಯಮ ಶಾಲೆಗಳು ಹೆಚ್ಚಾದಂತೆ ಕನ್ನಡದಲ್ಲಿ ವಿಜ್ಞಾನ ಕಲಿಯಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆ ಹಬ್ಬುತ್ತಿದೆ. ಡಾ. ಜಿ.ಎಸ್.ಜಯದೇವ ಮೊದಲಾದ ಶಿಕ್ಷಣ ತಜ್ಞರು ಮಾತೃಭಾಷೆಯಲ್ಲಿ ವಿಜ್ಞಾನ ಕಲಿಕೆ ಸಾಧ್ಯ ಎಂಬುದನ್ನು ಸಾಬೀತು ಪಡಿಸಲು ವಿಜ್ಞಾನ ಶೈಕ್ಷಣಿಕ ಪತ್ರಿಕೆಗಳನ್ನು ಹೊರತರುತ್ತಿದ್ದಾರೆ. ಎಲ್ಲ ಕಡೆ ವೈಜ್ಞಾನಿಕ ವಿಚಾರ, ಚಿಂತನೆ ಮತ್ತು ಮಾಹಿತಿಯನ್ನು ಮಾತೃಭಾಷೆಗಳಲ್ಲಿ ಬೆಳೆಸಲು ಅನುವಾದಗಳು ಮುಖ್ಯವಾದ ಒಂದು ಆಕರ ಎಂಬುದು ಒಪ್ಪಿತವಾಗಿದೆ. ಈ ಹಿನ್ನೆಲೆಯಲ್ಲಿ ಶಬ್ದನಾ ವಿಭಾಗ ‘ವಿಜ್ಞಾನ ಮತ್ತು ಅನುವಾದ’ ಕುರಿತು ಸಂವಾದ ಹಮ್ಮಿಕೊಂಡಿದೆ. ಆಸಕ್ತರೆಲ್ಲರಿಗೂ ಉಚಿತ ಪ್ರವೇಶ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಸ್ಥಳ– ಕಾನ್ಫರೆನ್ಸ್ ಹಾಲ್, ಸಾಹಿತ್ಯ ಅಕಾಡೆಮಿ, ದಕ್ಷಿಣ ಪ್ರಾದೇಶಿಕ ಕಚೇರಿ, ಸೆಂಟ್ರಲ್ ಕಾಲೇಜು ಆವರಣ, ಬಿ.ಆರ್. ಅಂಬೇಡ್ಕರ್ ವೀಧಿ. ಇದೇ 22 (ಶುಕ್ರವಾರ) ಸಂಜೆ 5
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.