ADVERTISEMENT

ಓದಿದ್ದನ್ನು ನಿಖರವಾಗಿ ಬರೆಯುವ ಕೌಶಲ ಮುಖ್ಯ: ಸಂತೋಷ ಕಾಮಗೌಡ, ಕೆಪಿಎಸ್‌ಸಿ ಸಾಧಕ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 19:30 IST
Last Updated 6 ಅಕ್ಟೋಬರ್ 2021, 19:30 IST
ಸಂತೋಷ ಕಾಮಗೌಡ
ಸಂತೋಷ ಕಾಮಗೌಡ   

l ನಿಮ್ಮ ಶೈಕ್ಷಣಿಕ ಜೀವನದ ಬಗ್ಗೆ ವಿವರಿಸ್ತೀರಾ?

ಚಿಕ್ಕೋಡಿ ತಾಲ್ಲೂಕಿನ ಕಬ್ಬೂರು ತೋಟದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಮನೆಯಲ್ಲಿ ತಂದೆ– ತಾಯಿ ಬೇರೆಯವರ ಹೊಲದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರಿಂದ ಮುಂದೆ ಓದಿಸುವುದು ದುಸ್ತರವಾಗಿತ್ತು. ಇದನ್ನರಿತ ನಮ್ಮ ಮಾವನವರು ನನ್ನನ್ನು ಬೆಲ್ಲದಬಾಗೇವಾಡಿಯ ಭರತೇಶ ವಿದ್ಯಾಲಯಕ್ಕೆ ಸೇರಿಸಿದರು. ಅದು ನನ್ನ ಜೀವನ ಮುಖ್ಯ ತಿರುವು. ಬೆಲ್ಲದಬಾಗೇವಾಡಿಯ ಭರತೇಶ ವಿದ್ಯಾಲಯದಲ್ಲಿಯೇ ನಾನು ಆರನೇ ತರಗತಿಯಿಂದ ಪಿಯುಸಿವರೆಗೂ ಅಧ್ಯಯನ ಮಾಡಿದೆ. ಪಿಯುಸಿಯಲ್ಲಿ ಶೇ 87 ಅಂಕ ಗಳಿಸಿದ್ದರಿಂದ ನನಗೆ ಅಂಚೆ ಇಲಾಖೆಯಲ್ಲಿ ನೌಕರಿ ದೊರೆಯಿತು.

l ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಒಲವು ಮೂಡಿದ್ದು ಹೇಗೆ?

ADVERTISEMENT

ಮನೆಯಲ್ಲಿ ತುಂಬಾ ಬಡತನ. ಒಂದು ಎಕರೆ ಭೂಮಿಯಲ್ಲೇ ಜೀವನ ನಡೆಸುವುದು ಕಷ್ಟವಾಗಿತ್ತು. ಯಾವುದೋ ಒಂದು ನೌಕರಿಯ ಅವಶ್ಯಕತೆಯಿತ್ತು. ನಮ್ಮ ತಂದೆ– ತಾಯಿ ಪಡುತ್ತಿರುವ ಕಷ್ಟವನ್ನು ನೋಡಿ ನನಗೆ ಯಾವುದಾದರೂ ಒಂದು ಉದ್ಯೋಗ ಮಾಡಬೇಕೆನಿಸಿತ್ತು. ಅದೇ ಸಮಯದಲ್ಲಿ ಅಂಚೆ ಇಲಾಖೆಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ತರಲು 25 ರೂಪಾಯಿ ಕೂಡ ಇರಲಿಲ್ಲ. ಯಾರೋ ನೀಡಿದ ಅರ್ಜಿಯನ್ನು ಹಾಕಿದೆ. ಅಂಚೆ ಇಲಾಖೆಯಲ್ಲಿ ನೌಕರಿ ದೊರೆತಾಗ ನಿಟ್ಟುಸಿರುಬಿಟ್ಟೆ. ನಿತ್ಯ ನಾನು ನೌಕರಿಗಾಗಿ ಕಬ್ಬೂರಿಂದ ಚಿಕ್ಕೋಡಿಗೆ ಹೋಗಿ ಬರುತ್ತಿದ್ದೆ. ನಮ್ಮ ಗ್ರಾಮದಲ್ಲಿನ ರೈತರು, ಕೂಲಿಕಾರರು ಕಂದಾಯ ಇಲಾಖೆಯಲ್ಲಿನ ತಮ್ಮ ವೈಯಕ್ತಿಕ ಕೆಲಸಕ್ಕೆ ನನ್ನ ನೆರವು ಬಳಸಿಕೊಳ್ಳುತ್ತಿದ್ದರು. ತಾಲ್ಲೂಕು ಕಚೇರಿಗೆ ತೆರಳಿ ಪಹಣಿ ತರಲು ತುಂಬಾ ಕಷ್ಟಪಡುತ್ತಿದ್ದೆ. ರೈತರು ಪಹಣಿ ಮತ್ತು ಇತರೆ ಪತ್ರಗಳನ್ನು ಪಡೆಯಲು ಹರಸಾಹಸ ಪಡುವುದನ್ನು ಕಣ್ಣಾರೆ ಕಂಡೆ. ಮುಂದೆ ಕಂದಾಯ ಇಲಾಖೆಯಲ್ಲಿ ನೌಕರಿ ಪಡೆದು ರೈತರ ಕಷ್ಟಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ನಿರ್ಧರಿಸಿದೆ.

l ಉದ್ಯೋಗ ಮಾಡುತ್ತಲೇ ಪರೀಕ್ಷೆ ತಯಾರಿ ಕಷ್ಟವೆನಿಸಲಿಲ್ಲವೇ?

ನೌಕರಿ ಮಾಡುತ್ತಲೇ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಬಿ.ಕಾಂ ಹಾಗೂ ಎಂಎ, ಎಂಬಿಎ ದೂರಶಿಕ್ಷಣ ಪೂರೈಸಿದೆ. ದೊರೆತ ಸಮಯವನ್ನೇ ಅಧ್ಯಯನಕ್ಕೆ ಮೀಸಲಿಟ್ಟೆ. ವಾರಾಂತ್ಯ ಸಿಗುವ ಎರಡು ರಜೆಯನ್ನು ಪರೀಕ್ಷೆ ತಯಾರಿಗೆ ಬಳಸಿಕೊಂಡೆ. ನಾನು ಉದ್ಯೋಗದಲ್ಲಿರುವ ಚಿಕ್ಕೋಡಿಯಲ್ಲೇ ಬಾಡಿಗೆ ಕೊಠಡಿ ಮಾಡಿ ಓದಲು ಶುರು ಮಾಡಿದೆ. ಅದರಿಂದ ನಿತ್ಯ ಓಡಾಡುವ ತೊಂದರೆ ತಪ್ಪಿತಲ್ಲದೆ ಸಮಯದ ಉಳಿತಾಯವಾಯಿತು. ಬೆಳಗಿನ ಸಮಯ ಮತ್ತು ಸಂಜೆ ಹೊತ್ತು ಓದಿಗಾಗಿ ಸರಿಯಾಗಿ ನಿರ್ವಹಣೆ ಮಾಡಿದೆ. ನನ್ನ ನಾಲ್ಕು ಜನ ಆತ್ಮೀಯ ಸ್ನೇಹಿತರು ನನ್ನ ಜೊತೆ ಸೇರಿದರು. ಅಧ್ಯಯನ ಮುಗಿದಾದ ಮೇಲೆ ವಿಷಯದ ಕುರಿತು ಚರ್ಚಿಸುತ್ತಿದ್ದೆವು. ನಂತರ ಚರ್ಚಿಸಿದ ವಿಷಯವನ್ನು ಬರೆಯುತ್ತಿದ್ದೆವು. ಪತ್ರಿಕೆಗಳಲ್ಲಿ ಬರುವ ಕೆಎಎಸ್ ಮತ್ತು ಐಎಎಸ್ ಅಧಿಕಾರಿಗಳ ಸಂದರ್ಶನ ಓದಿದಾಗ ನನ್ನ ಮನಸ್ಸು ನಿರಾಳವಾಗುತ್ತಿತ್ತು. ನಿರಂತರ ಅಧ್ಯಯನಕ್ಕೆ ಹಾತೊರೆಯುತಿತ್ತು. ಪ್ರಚಲಿತ ವಿದ್ಯಮಾನಕ್ಕೆ ದಿನಪತ್ರಿಕೆಗಳು ತುಂಬಾ ಸಹಾಯಕ.

l ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲು ನಿಮ್ಮ ಮುಂದೆ ಇದ್ದ ಸವಾಲು..

ಬಡ ಕುಟುಂಬದಲ್ಲಿ ಹುಟ್ಟಿದೆನಾದರೂ ಎದೆಗುಂದಲಿಲ್ಲ. ಪಿಯುಸಿ ತರುವಾಯ ನನಗೆ ಅಂಚೆ ಇಲಾಖೆಯಲ್ಲಿ ಕೆಲಸ ದೊರೆತಿದ್ದರಿಂದ ಮುಂದಿನ ವಿದ್ಯಾಭ್ಯಾಸ ಮಾಡಲು ನನಗೆ ನೆರವಾಯಿತು. ಯಾವುದೇ ತರಬೇತಿ ಪಡೆಯಲು ಸಾಧ್ಯವಾಗದಿದ್ದರೂ ಕೆಎಎಸ್ ಪಾಸಾದವರ ಹತ್ತಿರ ತೆರಳಿ ಅವರ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದೆ. ಅದು ನನಗೆ ಹುಮ್ಮಸ್ಸು ತರುತ್ತಿತ್ತು. ಬೆಂಬಿಡದ ಪ್ರಯತ್ನದಿಂದ ಯಶಸ್ವಿಯಾದೆ.

l ಸ್ಪರ್ಧಾರ್ಥಿಗಳಿಗೆ ತಾವು ನೀಡುವ ಸಲಹೆ..

ವಿದ್ಯಾರ್ಥಿಗಳು ತಾವು ಆಯ್ದುಕೊಂಡ ಆಧ್ಯಯನದ ಜೊತೆಗೆ ನಿತ್ಯ ದಿನಪತ್ರಿಕೆ ಓದುವ ರೂಢಿ ಇಟ್ಟುಕೊಳ್ಳಬೇಕು. ಕೇವಲ ತಲೆಬರಹವನ್ನಷ್ಟೇ ಓದದೇ ಪತ್ರಿಕೆಯನ್ನು ಇಡಿಯಾಗಿ ಓದುವ ಪರಿಪಾಠ ಬೆಳೆಸಿಕೊಳ್ಳಬೇಕು. ಇಂದಿನ ಸ್ಪರ್ಧಾರ್ಥಿಗಳು ನೂರಾರು ಪುಸ್ತಕಗಳನ್ನು ಓದಿಕೊಳ್ಳುತ್ತಾರೆ. ಹತ್ತು ಗಂಟೆಗಳ ಕಾಲ ಅಧ್ಯಯನ ಮಾಡುತ್ತಾರೆ. ಆದರೆ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬ ಗೊಂದಲ ಅವರನ್ನು ಕಾಡುತ್ತದೆ. ಎಷ್ಟೇ ಅಧ್ಯಯನ ಮಾಡಿದರೂ ಉತ್ತರ ಬರೆಯುವ ಕೌಶಲ ಬೆಳೆಸಿಕೊಳ್ಳದಿದ್ದರೆ ಯಶಸ್ಸು ಕಷ್ಟ. ಓದಿದ್ದನ್ನು ಅಚ್ಚುಕಟ್ಟಾಗಿ ಮತ್ತು ನಿಖರವಾಗಿ ಬರೆಯುವ ಕೌಶಲ ಬಹಳ ಮುಖ್ಯ. ಅದು ಪರೀಕ್ಷೆ ತಯಾರಿಯ ಒಂದು ಭಾಗವಾಗಬೇಕು.

ಸಂತೋಷ ಕಾಮಗೌಡ ಅವರು ತಾವು ಸಂಗ್ರಹಿಸಿದ ಅಧ್ಯಯನ ಸಾಮಗ್ರಿಯಲ್ಲಿ ‘ಪ್ರಜಾವಾಣಿ’ಗೆ ಸಿಂಹಪಾಲು ನೀಡುತ್ತಾರೆ. ಅಷ್ಟೇ ಅಲ್ಲದೇ ಪತ್ರಿಕೆಯನ್ನು ಹೇಗೆ ಓದಬೇಕು, ಪತ್ರಿಕೆಯ ಸದುಪಯೋಗ ಹೇಗೆ ಎಂಬುದರ ಕುರಿತು ವಿಡಿಯೊ ಮಾಡಿ ಯೂಟ್ಯೂಬ್‌ನಲ್ಲಿ ಹರಿಯಬಿಟ್ಟಿದ್ದು, ಸ್ಪರ್ಧಾತ್ಮಕ ದೃಷ್ಟಿಕೋನದಿಂದ ವಿವರಿಸಿದ್ದಾರೆ. ಅದು ಲಕ್ಷಕ್ಕಿಂತ ಹೆಚ್ಚಿನ ಜನರಿಗೆ ತಲುಪಿದೆ. ಸಂದರ್ಶನ ಎದುರಿಸುವ ಬಗೆ, ಒಂದೇ ಪ್ರಯತ್ನದಲ್ಲಿ ಕೆಎಎಸ್ ಹಾಗೂ ಐಎಎಸ್ ಪಾಸಾಗುವುದು, ಗುಣಮಟ್ಟದ ಅಧ್ಯಯನ, ಓದಿದ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಮುಂತಾದ ವಿಷಯಗಳ ಕುರಿತು ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಪರೀಕ್ಷೆ ಬರೆಯುವವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರ ಯೂಟ್ಯೂಬ್ ಚಾನೆಲ್‌ಗೆ 34 ಸಾವಿರ ಚಂದಾದಾರರಿದ್ದಾರೆ. ಇಮೇಲ್ (ksantoshshankar@gmail.com) ಮಾಡಿ ವಿನಂತಿಸಿಕೊಂಡರೆ ಉಚಿತವಾಗಿ ಅಧ್ಯಯನ ಸಾಮಗ್ರಿಗಳನ್ನು ಕಳಿಸಿಕೊಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.