ಡಂಬಳ: ಈ ಸಲದ ಲೋಕಸಭಾ ಚುನಾವಣೆ ಕಾಂಗ್ರೆಸ್, ಜೆಡಿಎಸ್ ಹಾಗೂ ಇತರ ಪಕ್ಷಗಳ ವಿರುದ್ಧವಲ್ಲ. ದೇಶದ್ರೋಹಿಗಳ ವಿರುದ್ಧದ ಚುನಾವಣೆಯಾಗಿದ್ದು ಅಮೆರಿಕ, ಕೆನಡಾ, ಇಂಗ್ಲೆಂಡ್ ಸೇರಿದಂತೆ ಇತರ ದೇಶದಲ್ಲಿರುವ ಭಾರತೀಯರು ಮೋದಿ ನಾಯಕತ್ವ ಮೆಚ್ಚಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮತದಾನ ಮಾಡಲು ಬರುತ್ತಿದ್ದಾರೆ ಎಂದು ಶಾಸಕ ಕಳಕಪ್ಪ ಬಂಡಿ ಅಭಿಪ್ರಾಯಪಟ್ಟರು.
ಇಲ್ಲಿನ ತೋಂಟದಾರ್ಯ ಕಲಾಭವನದಲ್ಲಿ ಭಾನುವಾರ ಹಾವೇರಿ ಲೋಕಸಭಾ ಕ್ಷೇತ್ರದ ರೋಣ ಮತಕ್ಷೇತ್ರದ ಡಂಬಳ ಮಂಡಳದ ಹಿರೇವಡ್ಡಟ್ಟಿ ಹಾಗೂ ಡಂಬಳ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಪಕ್ಷ ಅವನತಿಗೆ ಬಂದಿದೆ. ದೇಶದ ಭವಿಷ್ಯದಲ್ಲಿ ಪ್ರತಿಯೊಬ್ಬರ ಭವಿಷ್ಯವಿದ್ದು ದೇಶದ ಬಲಿಷ್ಠ ನಾಯಕತ್ವಕ್ಕಾಗಿ ಮೋದಿ ಮೊತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕೆಂದು ದೇಶದ ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ. ರಾಜ್ಯದ 20 ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಜಯ ಗಳಿಸಲಿದ್ದು ಕೇಂದ್ರದಲ್ಲಿ ನಮ್ಮ ಪಕ್ಷ ಮತ್ತೊಮ್ಮೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯ ಮುಖಂಡ ಎಂ.ಎಸ್. ಕರಿಗೌಡರ ಮಾತನಾಡಿ, ‘ಹತ್ತು ವರ್ಷದ ಕಾಲ ದೇಶದಲ್ಲಿ ರಿಮೋಟ್ ಕಂಟ್ರೋಲ್ ಪ್ರಧಾನಮಂತ್ರಿ ಇದ್ದಾಗ ದೇಶದ ಅಭಿವೃದ್ಧಿ ಕುಂಠಿತಗೊಂಡಿತ್ತು. ಕೇಂದ್ರ ಸರ್ಕಾರದ ಜನಧನ, ಸುಕನ್ಯಾ ಸಮೃದ್ಧಿ, ಮುದ್ರಾ ಇತರೆ ಯೋಜನೆ ಸೇರಿದಂತೆ ರೈತಪರ, ಕುಶಲಕರ್ಮಿಗಳ ಬಡವರ ಹಿಂದುಳಿದ ವರ್ಗ ಸೇರಿದಂತೆ ಎಲ್ಲಾ ಸಮುದಾಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ’ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಬೀರಪ್ಪ ಎಸ್. ಬಂಡಿ, ಗಂಗಣ್ಣ ಸೊರಟೂರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶಕುಂತಲಾ ಆರ್. ಚವ್ಹಾಣ, ಸೋಮಶೇಖರ ಚನ್ನಳ್ಳಿ, ಗಿಡ್ಡಪ್ಪ ಹಾರೂಗೇರಿ, ವೆಂಕನಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಗಂಗಾವತಿ, ಎಸ್.ವಿ. ಪಾಟೀಲ, ಜಾಕೀರ್ ಮೂಲಿಮನಿ, ಅಂದಪ್ಪ ಹಾರೂಗೇರಿ, ರವಿ ಚವ್ಹಾಣ, ನಾಗರಾಜ ಕಾಟ್ರಳ್ಳಿ, ಪಕ್ಕನಗೌಡ ಗೌಡರ, ಬಸವರಾಜ ಸಂಗನಾಳ, ಸಿದ್ದಪ್ಪ ನಂಜಪ್ಪನವರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.