ADVERTISEMENT

ಕಾವಲುಗಾರರಾಗಿ ದೇಶವನ್ನು ಕಾಯುತ್ತಿರುವ ಮೋದಿ: ಶಾಸಕಿ ಶಶಿಕಲಾ ಜೋಲ್ಲೆ

ಮೈ ಭೀ ಚೌಕಿದಾರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 14:28 IST
Last Updated 31 ಮಾರ್ಚ್ 2019, 14:28 IST
ಬಾಗಲಕೋಟೆಯ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಭಾನುವಾರ ಪ್ರಧಾನಿಯ ‘ಮೈ ಭೀ ಚೌಕಿದಾರ’ ಸಂವಾದ ಕಾರ್ಯಕ್ರಮದ ಬಳಿಕ ಶಾಸಕಿ ಶಶಿಕಲಾ ಜೋಲ್ಲೆ ಮಾತನಾಡಿದರು. 
ಬಾಗಲಕೋಟೆಯ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಭಾನುವಾರ ಪ್ರಧಾನಿಯ ‘ಮೈ ಭೀ ಚೌಕಿದಾರ’ ಸಂವಾದ ಕಾರ್ಯಕ್ರಮದ ಬಳಿಕ ಶಾಸಕಿ ಶಶಿಕಲಾ ಜೋಲ್ಲೆ ಮಾತನಾಡಿದರು.    

ಬಾಗಲಕೋಟೆ: ‘ಮೋದಿ ದೇಶದ ಪ್ರಧಾನಿಯಾಗದೆ, ಪ್ರಧಾನ ಸೇವಕರಾಗುವ ಮೂಲಕ ದೇಶದ ಅಭಿವೃದ್ಧಿ ಮಾಡತ್ತಾ, ಚೌಕಿದಾರರಾಗುವ ಮೂಲಕ ದೇಶವನ್ನು ಕಾವಲು ಮಾಡುತ್ತಿದ್ದಾರೆ’ಎಂದು ಶಾಸಕಿ ಶಶಿಕಲಾ ಜೋಲ್ಲೆ ಹೇಳಿದರು.

ಇಲ್ಲಿನ ಬಿವಿವಿ ಸಂಘದಲ್ಲಿ ಭಾನುವಾರ ನಡೆದ ‘ಮೈ ಭೀ ಚೌಕಿದಾರ‘ ಎಂಬ ಪ್ರಧಾನಿ ಮೋದಿ ಅವರ ಸಂವಾದ ಕಾರ್ಯಕ್ರಮದ ಬಳಿಕ ಅವರು ಮಾತನಾಡಿ, ‘ದೇಶದ ರೈತ, ಸೈನಿಕರಷ್ಟೆ ದೇಶದ ಕಾವಲುಗಾರನಲ್ಲ. ದೇಶದ ಪ್ರತಿಯೊಬ್ಬ ಪ್ರಜೆ ಕೂಡಾ ದೇಶದ ಕಾವಲುಗಾರನಂತೆ ಕೆಲಸ ಮಾಡಬೇಕಿದೆ’ ಎಂದರು.

‘ದೇಶದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸುವ ಸಂದರ್ಭದಲ್ಲಿ ದೇಶಕ್ಕೆ ಭದ್ರತೆ ಇರಲಿಲ್ಲ. ಮೋದಿ ದೇಶದ ಪ್ರಧಾನಿಯಾದ ಬಳಿಕ ಇತ್ತೀಚೆಗೆ ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ಉಗ್ರರ ದಾಳಿಗೆ ಉತ್ತರವಾಗಿ ಮೋದಿ ಏರ್ ಸ್ಟ್ರೈಕ್ ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಇದು ಬದಲಾಗುತ್ತಿರುವ ಭಾರತವಾಗಿದ್ದು, ದೇಶದ ವಿವಿಧ ಕ್ಷೇತ್ರದಲ್ಲಿನ ಜನರು ತಮ್ಮ ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುವ ಮೂಲಕ ದೇಶವನ್ನು ಆದರ್ಶಗೊಳಿಸಬೇಕು’ ಎಂದರು.

ADVERTISEMENT

‘ದೇಶದ ಸಾಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುತ್ತಾ ಮೋದಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯುತ್ತಿರುವುದನ್ನು ದೇಶದ ಜನತೆ ಕೂಡಾ ಅವರನ್ನು ಅನುಸರಿಸಬೇಕಿದೆ. ಪ್ರಧಾನಿ ಮೋದಿ ದೇಶವನ್ನು ವಿಶ್ವದ ಗುರು ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅದಕ್ಕೆ ಕೆಲವೆ ವರ್ಷಗಳು ಬೇಕಿದ್ದು, ಈ ಕಾರ್ಯಕ್ಕೆ ಮೋದಿ ಅವರೊಂದಿಗೆ ದೇಶದ ಪ್ರಜೆಗಳು ಕೈ ಜೋಡಿಸಬೇಕಿದೆ’ ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ, ‘ದೇಶವನ್ನು ಲೂಟಿ ಮಾಡುವವರನ್ನು ತಡೆಯಲು ಮೋದಿ ಚೌಕಿದಾರರಾಗಿದ್ದಾರೆ. ಚೌಕಿದಾರ ಅಭಿಯಾನವನ್ನು ದೇಶದ ಕೋಟ್ಯಾಂತರ ಜನರು ಅನುಸರಿಸುತ್ತಿದ್ದಾರೆ. ಒಂದು ಕೆನ್ನೆಗೆ ಬಾರಿಸಿದರೆ ಇನ್ನೊಂದು ಕೆನ್ನೆ ಕೊಡುವ ದಿನಗಳು ದೇಶದಲ್ಲಿಲ್ಲ. ಒಂದು ಕೆನ್ನೆಗೆ ಬಾರಿಸಿದರೆ ತೀರುಗಿ ಬಾರಿಸುವ ದಿನಗಳು ದೇಶದಲ್ಲಿವೆ’ ಎಂದರು.

ಪ್ರಧಾನಿ ಮೋದಿ ಅವರು ನಡೆಸಿದ ‘ಮೈ ಭೀ ಚೌಕಿದಾರ’ ಸಂವಾದದಲ್ಲಿ ಶಾಸಕ ವೀರಣ್ಣ ಚರಂತಿಮಠ, ಲೋಕಸಭೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ರೇವಣಕರ, ನಗರ ಘಟಕದ ಅಧ್ಯಕ್ಷ ರಾಜು ನಾಯ್ಕರ್, ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ, ನಗರಸಭೆ ಸದಸ್ಯರಾದ ಜ್ಯೋತಿ ಭಜಂತ್ರಿ, ಶಶಿಕಲಾ ಮಜ್ಜಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.