ಕೋಲಾರ: ‘ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಚುನಾವಣೆ ಸಂದರ್ಭದಲ್ಲಿ ಆರೋಪ ಕೇಳಿಬರುವುದು ಸಹಜ. ಇದನ್ನು ಎದುರಿಸಲು ಸಮರ್ಥನಾಗಿದ್ದೇನೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹೇಳಿದರು.
ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಹಿಂದೆ ಆರೋಪ ಎದುರಿಸಿಯೇ 7 ಬಾರಿ ಚುನಾವಣೆಯಲ್ಲಿ ಗೆದ್ದಿದ್ದೇನೆ. ಚುನಾವಣೆ ಹೇಗೆ ನಡೆಸಬೇಕೆಂದು ನನಗೆ ಗೊತ್ತಿದೆ’ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
‘ನನ್ನ ಮತ್ತು ಕುಟುಂಬ ಸದಸ್ಯರ ಆಸ್ತಿ ಕುರಿತು ನಾಮಪತ್ರದ ಜತೆ ಚುನಾವಣಾ ಆಯೋಗಕ್ಕೆ ದಾಖಲೆಪತ್ರ ಸಲ್ಲಿಸಿದ್ದೇನೆ. ಸದ್ಯದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಆಸ್ತಿಯ ವಿವರ ನೀಡುತ್ತೇನೆ. ಎದುರಾಳಿಗಳ ಆರೋಪ ಚುನಾವಣೆ ಸಂದರ್ಭದಲ್ಲಿ ಮಾಮೂಲಿ’ ಎಂದು ವ್ಯಂಗ್ಯವಾಡಿದರು.
‘ಜಿಲ್ಲಾ ಕಾಂಗ್ರೆಸ್ ಮುಖಂಡರೆಲ್ಲಾ ಒಟ್ಟಾಗಿದ್ದೇವೆ. ನಾಮಪತ್ರ ಸಲ್ಲಿಸುವ ವೇಳೆ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸಲು ನಾಲ್ಕು ಮಂದಿಗೆ ಮಾತ್ರ ಅವಕಾಶವಿದ್ದ ಕಾರಣ ಪಕ್ಷದ ಹೆಚ್ಚಿನ ಮುಖಂಡರು ಜತೆಗೆ ಬರಲಿಲ್ಲ. ಇದಕ್ಕೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪಣ ತೊಟ್ಟಿದ್ದೇವೆ: ‘ನಾಮಪತ್ರ ಸಲ್ಲಿಕೆ ವೇಳೆ ಇಬ್ಬರು ಶಾಸಕರು ಹಾಜರಿದ್ದರು. ಉಳಿದ ಶಾಸಕರು ಸದ್ಯದಲ್ಲೇ ನನ್ನೊಂದಿಗೆ ಬರುತ್ತಾರೆ. ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗಿವೆ. ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೂಟವು ಇಟ್ಟಾಗಿ ಸೀಟು ಹಂಚಿಕೆ ಮಾಡಿಕೊಂಡಿದ್ದು, ಕೋಮುವಾದಿ ಬಿಜೆಪಿಯನ್ನು 28 ಕ್ಷೇತ್ರಗಳಲ್ಲೂ ಮಣಿಸಲು ಪಣ ತೊಟ್ಟಿದ್ದೇವೆ’ ಎಂದು ವಿವರಿಸಿದರು.
‘ಮುಂದಿನ ವಾರ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಿ ಉಭಯ ಪಕ್ಷಗಳ ಒಗ್ಗಟ್ಟಿನ ಕುರಿತು ಜನರಿಗೆ ಸಂದೇಶ ನೀಡಲಾಗುತ್ತದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಮೈತ್ರಿಕೂಟದ ಅಭ್ಯರ್ಥಿಗಳು ಗೆಲ್ಲುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.