ಚಿತ್ರದುರ್ಗ: ಭಾರತ ಹೊರತುಪಡಿಸಿ ಜಗತ್ತಿನ ಬೇರಾವ ದೇಶದಲ್ಲಿಯೂ ನಿಂಬೆಹಣ್ಣು ಸಿಗುವುದಿಲ್ಲ. ಧೈರ್ಯವಿದ್ದರೆ ಎಚ್.ಡಿ.ರೇವಣ್ಣ ದೇಶಬಿಟ್ಟು ಹೋಗಲಿ ಎಂದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸವಾಲು ಹಾಕಿದರು.
‘ಮೋದಿ ಮತ್ತೊಮ್ಮೆ– ನನ್ನ ದೇಶ, ನನ್ನ ಪಾತ್ರ’ ಕುರಿತು ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರಾಜಕೀಯ ನಿವೃತ್ತಿ ಪಡೆದು ದೇಶ ತೊರೆಯುವುದಾಗಿ ರೇವಣ್ಣ ಘೋಷಣೆ ಮಾಡಿದ್ದಾರೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ. ಮೇ 23ರಂದು ವಿದೇಶಕ್ಕೆ ತೆರಳಲು ಇಂದೇ ಟಿಕೆಟ್ ಕಾಯ್ದಿರಿಸಿ’ ಎಂದು ಕುಟುಕಿದರು.
‘ನಿಮ್ಮ ತಂದೆಯೂ (ಎಚ್.ಡಿ.ದೇವೇಗೌಡ) ಹಿಂದೇ ಇದೇ ಮಾತು ಹೇಳಿದ್ದರು. ಮೋದಿ ಪ್ರಧಾನಿಯಾದ ಬಳಿಕ ಅವರು ದೇಶ ಬಿಟ್ಟು ಹೋಗಲಿಲ್ಲ. ದಯೆ, ಕರುಣೆ ಇರುವುದು ಭಾರತದಲ್ಲಿ ಮಾತ್ರ’ ಎಂದರು.
‘ಆದಾಯ ತೆರಿಗೆ ಇಲಾಖೆ ಈಶ್ವರ ದೇಗುಲದ ಮೇಲೆ ದಾಳಿ ಮಾಡಿಲ್ಲ. ದೇಗುಲದ ಅರ್ಚಕರ ಮನೆ ಮೇಲೆ ದಾಳಿ ನಡೆದಿದೆ. ಅರ್ಚಕರಿಗೂ ಅಕ್ರಮ ಆಸ್ತಿಗೂ ಇರುವ ಸಂಬಂಧ ಶೀಘ್ರವೇ ಬೆಳಕಿಗೆ ಬರಲಿದೆ. ಅಲ್ಲಿಯವರೆಗೂ ಕಾದುನೋಡಿ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.