ADVERTISEMENT

ಪ್ರಜಾಸತ್ತೆಗೆ ಎಳ್ಳು ನೀರು ಬಿಟ್ಟ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 15:27 IST
Last Updated 12 ಏಪ್ರಿಲ್ 2019, 15:27 IST

ಕೋಲಾರ: ‘ದೇಶದಲ್ಲಿ ಕೋಮುವಾದಿ ಶಕ್ತಿಗಳನ್ನು ಸೋಲಿಸುವ ಉದ್ದೇಶಿಂದ ಸಂಘಟನೆಯು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಲಿದೆ’ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಘಟಕದ ಸಂಘಟನಾ ಸಂಚಾಲಕ ಶ್ರೀನಿವಾಸ್ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದೇಶದ ಸಂವಿಧಾನವು ಜಗತ್‌ ಪ್ರಸಿದ್ಧವಾದ ಜನ ಮಾನ್ಯತೆ ಪಡೆದ ಸಂವಿಧಾನವಾಗಿದೆ. ಜನತಾಂತ್ರಿಕ ಸಂವಿಧಾನವಾಗಿ ಸಮಾಜದ ಚಲನಶೀಲತೆ, ಏಕತೆ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಅಭಿವೃದ್ಧಿಯಲ್ಲಿ ಪ್ರಗತಿ ಕಾಣುತ್ತಿರುವ ದೇಶವು ಇಂದು ದೊಡ್ಡ ಅಪಾಯ ಎದುರಿಸುತ್ತಿದೆ. ಸಂವಿಧಾನವನ್ನೇ ಬುಡಮೇಲು ಮಾಡುವ ಸಂಚು ನಡೆದಿದೆ. ದೇಶದ ಅಧಿಕಾರ ಮೂಲಭೂತವಾದಿಗಳ ಹಿಡಿತದಲ್ಲಿರುವುದರಿಂದ ಮತ್ತೊಮ್ಮೆ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕೆ ಸಂಘರ್ಷಕ್ಕಿಳಿಯುವ ಸನ್ನಿವೇಶ ಸೃಷ್ಟಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಬಿಜೆಪಿಯು ಪ್ರಜಾಸತ್ತಾತ್ಮಕ ಸ್ವಾಯತ್ತ ಸಂಸ್ಥೆಗಳ ಮೇಲೆ ಸವಾರಿ ಮಾಡಿ ಪ್ರಜಾಸತ್ತೆಗೆ ಎಳ್ಳು ನೀರು ಬಿಟ್ಟಿದೆ. ಅಲ್ಲದೇ, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಜನತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಕೋಮುವಾದಿತನದ ಅಪಾಯದ ಬಗ್ಗೆ ಜನ ಜಾಗೃತರಾಗಬೇಕು. ಅಂಬೇಡ್ಕರ್ ಕನಸಿನ ಬಹುತ್ವ ಭಾರತದ ರಕ್ಷಣೆಗಾಗಿ ಸಂಘಟನೆಯು ರಾಜ್ಯದೆಲ್ಲೆಡೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತದೆ’ ಎಂದು ಹೇಳಿದರು.

ಸಮಿತಿಯ ಪದಾಧಿಕಾರಿಗಳಾದ ಪಿ.ಸಿ.ನಾರಾಯಣಸ್ವಾಮಿ, ರಂಗನಾಥ್, ಟಿ.ಕುಮಾರ್, ಶ್ರೀನಿವಾಸ್, ಎ.ಕೆ.ವೆಂಕಟೇಶ್, ಮುನಿಸ್ವಾಮಿ, ರವಿಕುಮಾರ್, ಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.