ADVERTISEMENT

ಸುರೇಶ್‌ಗೆ ಜನರ ಸಮಸ್ಯೆ ಗೊತ್ತಿಲ್ಲ: ಮಾರಸಂದ್ರ ಮುನಿಯಪ್ಪ ಆರೋಪ

ಬಿಎಸ್ ಪಿ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 15:02 IST
Last Updated 15 ಏಪ್ರಿಲ್ 2019, 15:02 IST
ರಾಮನಗರದಲ್ಲಿ ಸೋಮವಾರ ಸಂಜೆ ಬಿಎಸ್ಪಿ ಅಭ್ಯರ್ಥಿ ಪರ ಮತಯಾಚನೆ ನಡೆಯಿತು
ರಾಮನಗರದಲ್ಲಿ ಸೋಮವಾರ ಸಂಜೆ ಬಿಎಸ್ಪಿ ಅಭ್ಯರ್ಥಿ ಪರ ಮತಯಾಚನೆ ನಡೆಯಿತು   

ರಾಮನಗರ: ‘ಡಿ.ಕೆ. ಸುರೇಶ್‌ಗೆ ಜನರ ಬಗ್ಗೆ ಕಾಳಜಿ ಇಲ್ಲ, ಅವರಿಗೆ ಗ್ರಾನೈಟ್‌ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳ ಮೇಲೆ ಆಸಕ್ತಿ ಹೆಚ್ಚು’ ಎಂದು ಬಿಎಸ್ಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಲೇವಡಿ ಮಾಡಿದರು.

ಇಲ್ಲಿನ ಹಳೇ ಬಸ್ ನಿಲ್ದಾಣದಲ್ಲಿ ಸೋಮವಾರ ಸಂಜೆ ನಡೆದ ಬಿಎಸ್ಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ಕಳೆದ ಐದು ವರ್ಷದಲ್ಲಿ ಅವರ ಆಸ್ತಿ ಐದು ಪಟ್ಟು ಆಸ್ತಿ ಹೆಚ್ಚಾಗಿದೆ. ಇವರಿಗೆ ಅಧಿಕಾರ ಬೇಕಿರುವುದು ಆಸ್ತಿಯನ್ನು ವೃದ್ಧಿಸಿಕೊಳ್ಳಲೆ ಹೊರತು ಸಮಾಜದ ಅಭಿವೃದ್ಧಿಗಾಗಿ ಅಲ್ಲ’ ಎಂದು ಆರೋಪಿಸಿದರು.

‘ಕ್ಷೇತ್ರದ ಮತದಾರರು ಈ ಚುನಾವಣೆಯಲ್ಲಿ ದಲಿತ ವಿರೋಧಿ ಕಾಂಗ್ರೆಸ್, ಮನುವಾದಿ ಬಿಜೆಪಿಯನ್ನು ಸೋಲಿಸಿ, ಜನಪರವಾದ ಬಿಎಸ್ಪಿ ಅಭ್ಯರ್ಥಿ ಚಿನ್ನಪ್ಪ ಚಿಕ್ಕಹಾಗಡೆ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದಲಿತರು, ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರ ಮೇಲೆ ದಾಳಿ ಪ್ರಕರಣಗಳು ಹೆಚ್ಚಾಗಿವೆ. ಬಿಜೆಪಿ ಸರ್ಕಾರ ಸಂವಿಧಾನ ಬದ್ಧವಾದ ಜನರ ಹಕ್ಕುಗಳನ್ನು ದಮನ ಮಾಡಲು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮಾತನಾಡಿ ‘ದೇಶದಲ್ಲಿ ದಲಿತರ ಅಭಿವೃದ್ಧಿ ಸಂಪೂರ್ಣ ಕಡೆಗಣಿಸಲಾಗಿದೆ. ಬಡ್ತಿ ಮೀಸಲಾತಿ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡದೆ ದಲಿತರನ್ನು ವಂಚಿಸಲಾಗಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆ, ಮೀಸಲಾತಿ ತೆಗೆಯುತ್ತೇವೆ ಎಂದು ಮಾತನಾಡುವವರ ಬಗ್ಗೆ ದಲಿತರು ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ಶೋಷಣೆಗೆ ಒಳಗಾಗುವುದು ತಪ್ಪುವುದಿಲ್ಲ. ಆದ್ದರಿಂದ, ಶೋಷಿತ ಸಮುದಾಯಗಳು ಒಂದಾಗಿ ಸಂವಿಧಾನ ಉಳಿಸಬೇಕು’ ಎಂದು ಮನವಿ ಮಾಡಿದರು.

‘ಕರ್ನಾಟಕದಲ್ಲಿ 38 ಸ್ಥಾನಗಳನ್ನು ಗೆದ್ದಿರುವ ಜೆಡಿಎಸ್ ಮುಖ್ಯಮಂತ್ರಿ ಸ್ಥಾನ ಗಳಿಸಿರುವಂತೆ, ದೇಶದಲ್ಲಿ ಈ ಬಾರಿ ಮಾಯಾವತಿ ಅವರು ಪ್ರಧಾನಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಎಸ್‌ಪಿ, ಬಿಎಸ್ ಪಿ ಮೈತ್ರಿಯು ಚುನಾವಣೆಯಲ್ಲಿ 80 ರಿಂದ 90 ಸ್ಥಾನಗಳನ್ನು ಗೆದ್ದರೂ ಸಾಕು. ಬೇರೆ ಪಕ್ಷಗಳು ಅನಿವಾರ್ಯವಾಗಿ ಮಾಯಾವತಿ ಅವರನ್ನು ಸಂಪರ್ಕಿಸಬೇಕಾಗುತ್ತದೆ. ಬಿಜೆಪಿಗೆ ಈ ಬಾರಿ 100ಕ್ಕಿಂತ ಹೆಚ್ಚು ಸ್ಥಾನಗಳು ಸಿಗುವುದಿಲ್ಲ’ ಎಂದು ಭವಿಷ್ಯ ನುಡಿದರು.

ಪಕ್ಷದ ಚುನಾವಣಾ ಉಸ್ತುವಾರಿ ಎಂ.ನಾಗೇಶ್ ಮಾತನಾಡಿ 'ಬಿಎಸ್ ಪಿ ದಲಿತರ ಪಕ್ಷ ಎಂಬ ಅಭಿಪ್ರಾಯ ಹಿಂದೆ ಇತ್ತು. ಈಗ ಬದಲಾಗಿದೆ. ಕ್ಷೇತ್ರ ವ್ಯಾಪ್ತಿಯ ಎಂಟೂ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸಿದ್ದೇವೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸರ್ವಜನರಿಗಾಗಿ ನಮ್ಮ ಪಕ್ಷ ಕೆಲಸ ಮಾಡುತ್ತಿದೆ' ಎಂದು ತಿಳಿಸಿದರು.

ಬಿಎಸ್ಪಿ ಮುಖಂಡರಾದ ಬಸವರಾಜು, ಅನ್ನದಾನಪ್ಪ, ಕೃಷ್ಣಪ್ಪ, ಹರೀಶ್,ಮುರುಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.